ಮೇಲುಕೋಟೆ: ‘ಚೆಲುವ ನಾರಾಯಣ ಸ್ವಾಮಿಯ ದೇವಾಲಯಕ್ಕೆ ಫೆಬ್ರುವರಿ ತಿಂಗಳಲ್ಲಿ ಸೂರ್ಯ ಮಂಡಲವಾಹನವನ್ನು ಸಮರ್ಪಿಸ ಲಾಗುವುದು’ ಎಂದು ಮದ್ದೇನಹಳ್ಳಿ ಸತ್ಯಸಾಯಿ ಮಂದಿರದ ಪೀಠಾಧಿಪತಿ ಮಧುಸೂದನಸಾಯಿ ಸ್ವಾಮೀಜಿ ಹೇಳಿದರು.
ಮದ್ದೇನಹಳ್ಳಿ ಭಗವಾನ್ ಸತ್ಯಸಾಯಿ ಆಶ್ರಮದಿಂದ ಭಾನುವಾರ ಆಗಮಿಸಿ ಸ್ವಾಮಿಯ ದರ್ಶನ ಪಡೆದು ನಂತರ ಮಾತನಾಡಿದರು.
‘ಬಹಳ ದಿನದ ಆಸೆಯಂತೆ ಇಲ್ಲಿಗೆ ಬಂದಿದ್ದೇನೆ. ಸ್ವಾಮಿಯ ದರ್ಶನ ದರ್ಶನ ಪಡೆದ ನಂತರ ಅತ್ಯಂತ ಸಂತೋಷ ವಾಯಿತು. ಸ್ಥಾನಾಚಾರ್ಯರು ಮತ್ತು ಅರ್ಚಕರ ಕೋರಿಕೆಯಂತೆ ರಥಸಪ್ತಮಿಯ ಸೂರ್ಯಮಂಡಲವಾಹನ ಸಮರ್ಪಿಸಲು ಮಹಾಲಕ್ಷ್ಮಿ ಸನ್ನಿಧಿಯಲ್ಲಿ ದೇವಿಯೇ ಅನುಜ್ಞೆ ನೀಡಿ ದಾರಿ ತೋರಿದ್ದಾಳೆ’ ಎಂದರು.
ಇದೇ ವೇಳೆ ಜೊತೆಯಲ್ಲಿ ಬಂದಿದ್ದ ವಿದೇಶಿ ಭಕ್ತರಿಗೆ ದೇವಾಲಯದ ಮಹತ್ವವನ್ನು ವಿವರಿಸಿ ರಾಮಾನುಜಾಚಾರ್ಯರ ತಪೋಭೂಮಿಯಾದ ಮೇಲುಕೋಟೆ ಅತ್ಯಂತ ಪವಿತ್ರವಾದ ಕ್ಷೇತ್ರವಾಗಿದ್ದು ಸಾಕ್ಷಾತ್ ಶ್ರೀಮನ್ನಾರಾಯಣ ನೆಲೆಸಿರುವ ದಿವ್ಯಕ್ಷೇತ್ರವಾಗಿದೆ ದರ್ಶನ ಮಾತ್ರದಿಂದಲೇ ಬೇಡಿದ್ದನ್ನು ಭಗವಂತ ಕರುಣಿಸುತ್ತಾನೆ ಎಂದರು.
ಸ್ವಾಮಿಯ ದರ್ಶನದ ನಂತರ ಯದುಗಿರಿನಾಯಕಿ ಅಮ್ಮನವರ ದರ್ಶನ ಪಡೆದರು. ರಾಮಾನುಜರ ಸನ್ನಿಧಿಯಲ್ಲಿ. ವಿದ್ವಾನ್ ಬಿ.ವಿ ಆನಂದಾಳ್ವಾರ್ ಶ್ರೀರಂಗಂರಾಮಪ್ರಿಯ ನೇತೃತ್ವದ ತಂಡ ವೇದಮಂತ್ರ ಪಠಿಸಿ ಗೌರವಿಸಿತು.
ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಂಗಳಮ್ಮ, ಬೆಂಗಳೂರು ಸಮಗ್ರ ಶಿಕ್ಷಣ ಅಭಿಯಾನ ಉಪನಿರ್ದೇಶಕ ಎಸ್.ಎನ್ ಮಂಜುನಾಥ್, ನಾಗೇಶ್ ಬೇವುಕಲ್, ಗರುಡಾಪುರ ರುದ್ರೇಶ್, ಜೆ.ವೈ. ಮಂಜುನಾಥ್, ನೇರಲಕೆರೆ ಸುರೇಶ್ ಹೊನಕೆರೆ ಯೋಗಾನರಸಿಂಹನ್, ನಾಗಮಂಗಲ ರಂಗಸ್ವಾಮಿ ಇದ್ದರು.