ಮಂಡ್ಯ: ಬೀನ್ಸ್, ಟೊಮೆಟೊ ಸೇರಿದಂತೆ ಅಗತ್ಯ ತರಕಾರಿಗಳ ಬೆಲೆ ಏರಿಕೆ ಕಂಡಿದ್ದು, ಗ್ರಾಹಕನ ಜೇಬಿಗೆ ಭಾರವಾಗಿದೆ. ಈರುಳ್ಳಿ ಬೆಲೆ ಕೂಡ ಏರಿಕೆಯಾಗಿದ್ದು ಗ್ರಾಹಕರು ಕಂಗಾಲಾಗಿದ್ದಾರೆ.
ಕಳೆದ ವಾರ ₹60ಕ್ಕೆ ಮಾರಾಟವಾಗುತ್ತಿದ್ದ ಕೆ.ಜಿ ಬೀನ್ಸ್ ಬೆಲೆ ಈ ವಾರ ₹100 ಗಡಿ ಮುಟ್ಟಿದೆ. ಇದಲ್ಲದೆ ₹20 ಇದ್ದ ಟೊಮೆಟೊ ₹40, ₹15 ಇದ್ದ ಈರುಳ್ಳಿ ₹30ಕ್ಕೆ, ₹15 ಇದ್ದ ಕಟ್ಟು ಕೊತ್ತಂಬರಿ ಸೊಪ್ಪಿನ ಬೆಲೆ ₹25ಗೆ ಏರಿಕೆಯಾಗಿದೆ. ಬೆಂಗಳೂರು, ಮೈಸೂರು ಮಾರುಕಟ್ಟೆಯಿಂದ ನಗರದ ಮಾರುಕಟ್ಟೆಗೆ ಆವಕ ಕಡಿಮೆಯಾಗಿರುವ ಪರಿಣಾಮ ಬೆಲೆ ಏರಿಕೆ ಕಂಡುಬಂದಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಉತ್ತರ ಕರ್ನಾಟಕದ ಭಾಗದಲ್ಲಿ ಭಾರೀ ಮಳೆ, ಪ್ರವಾಹದಿಂದ ಈರುಳ್ಳಿ ಬೆಳೆ ಹಾಳಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಸ್ಥಿರತೆ ಕಂಡಿದ್ದ ಈರುಳ್ಳಿ ಬೆಲೆ ಕಳೆದ ವಾರದಿಂದ ಏರಿಕೆಯಾಗಿದೆ. ಸಣ್ಣ ಈರುಳ್ಳಿ ಕೆ.ಜಿ.₹20–25, ದಪ್ಪ ಈರುಳ್ಳಿ ₹30 ರಂತೆ ಮಾರಲಾಗುತ್ತಿದೆ. ₹60 ಇದ್ದ ಕೆ.ಜಿ ಶುಂಠಿ ₹70, ₹50 ಇದ್ದ ಚೌಳೀಕಾಯಿ ₹60, ₹60 ಇದ್ದ ನುಗ್ಗೇಕಾಯಿ ₹70, ₹60 ಇದ್ದ ದಪ್ಪ ಮೆಣಸಿನಕಾಯಿ ₹80ಕ್ಕೆ ಏರಿಕೆ ಕಂಡಿದೆ.
ಬೀಟರೂಟ್ ₹30, ಸುವರ್ಣಗೆಡ್ಡೆ ₹40, ಬೆಳ್ಳುಳ್ಳಿ ₹120, ಹೀರೇಕಾಯಿ ₹40, ಮೂಲಂಗಿ ₹20, ಹಸಿರುಮೆಣಸಿನಕಾಯಿ ₹60, ಬದನೇಕಾಯಿ ₹30, ಕ್ಯಾರೆಟ್ ₹40, ಗೆಡ್ಡೇಕೋಸು ₹40, ಭಜಿ ಮೆಣಸಿನಕಾಯಿ ₹80, ಬೂದು ಗುಂಬಳ ₹20, ಹಾಗಲಕಾಯಿ ₹40, ಎಲೆಕೋಸು ₹20, ಹೂಕೋಸು ಒಂದಕ್ಕೆ ₹30, ಸೌತೇಕಾಯಿ ಒಂದಕ್ಕೆ ₹10, ನಿಂಬೆಹಣ್ಣು ₹2ರಂತೆ ಬಿಕರಿಯಾಗುತ್ತಿವೆ.
ನಾಟಿ ಕೊತ್ತಂಬರಿ ಸೊಪ್ಪು ₹30, ಫಾರಂ ₹25, ಕಿಲಕೀರರೆ ₹7, ಪುದೀನಾ ₹10, ಸಬಸಿಗೆ ₹10, ಮೆಂತೆ ₹10, ದಂಟು ₹7, ಕರಿಬೇವು ₹5, ಪಾಲಕ್ ₹5 ರಂತೆ ಮಾರಲಾಗುತ್ತಿದೆ.
ಹೂವಿನ ಬೆಲೆ ಇಳಿಕೆ: ಗಣೇಶ ಹಬ್ಬದಲ್ಲಿ ಏರಿಕೆಯಾಗಿದ್ದ ಹೂವಿನ ಬೆಲೆ ತುಸು ಕಡಿಮೆಯಾಗಿದೆ. ₹80 ಇದ್ದ ಸೇವಂತಿ ₹60, ₹100 ಇದ್ದ ಮಲ್ಲಿಗೆ ₹80, ₹40 ಇದ್ದ ಮರಳೆ ₹50, ₹100 ಇದ್ದ ಕನಕಾಂಬರ ₹150, ₹80 ಇದ್ದ ಕಾಕಡ ₹50, ₹30 ಇದ್ದ ಗಣಗಲೆ ₹50 ಆಗಿದೆ. ಬಿಡಿ ಹೂವು ಕೆ.ಜಿ ಮಲ್ಲಿಗೆ ₹350, ಮರಳೆ ₹300, ಕಾಕಡ ₹350, ಕನಕಾಂಬರ ₹2000, ಸೇವಂತಿ ₹180ರಂತೆ ಮಾರಾಟ ಮಾಡಲಾಗುತ್ತಿದೆ.
ಸೇಬು ಹಣ್ಣಿನ ಬೆಲೆ ಇಳಿಕೆ
₹ 200ರ ಗಡಿಯಲ್ಲಿದ್ದ ಕೆ.ಜಿ ಸೇಬು ಹಣ್ಣಿನ ಬೆಲೆಯಲ್ಲಿ ಇಳಿಕೆಯಾಗಿದೆ. ದೇಶೀಯ ಕಾಶ್ಮೀರಿ ಸೇಬು ಮಾರುಕಟ್ಟೆಗೆ ಹೇರಳವಾಗಿ ಹರಿದು ಬರುತ್ತಿರುವ ಕಾರಣ ಸೇಬಿನ ಬೆಲೆ ಇಳಿಕೆಯಾಗಿದೆ. ಪ್ರತಿ ಕೆ.ಜಿ ₹100–120ರಂತೆ ಮಾರಾಟವಾಗುತ್ತಿದೆ.
ಬೀಜರಹಿತ ದ್ರಾಕ್ಷಿ ₹160, ಬೀಜಸಹಿತ ದ್ರಾಕ್ಷಿ ₹100, ಸಪೋಟ ₹60, ಮೂಸಂಬಿ ₹80, ದಾಳಿಂಬೆ ₹100, ಅನಾನಸ್ ಒಂದಕ್ಕೆ ₹30, ಏಲಕ್ಕಿ ಬಾಳೆ ₹50, ಪಚ್ಚಬಾಳೆಹಣ್ಣು ₹20ಕ್ಕೆ ಮಾರಾಟವಾಗುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.