ಮಂಡ್ಯ: ನಗರದ ವಿವಿಧ ರಸ್ತೆಯಲ್ಲಿ ವಾಣಿಜ್ಯ ವ್ಯವಹಾರ ನಡೆಸುವ ಅಂಗಡಿಗಳ ನಾಮ ಫಲಕಗಳು ಕನ್ನಡ ಭಾಷೆಯಲ್ಲೇ ಇರಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಶುಕ್ರವಾರ ವಿವಿ ರಸ್ತೆಯಲ್ಲಿ ಪ್ರತಿಭಟನೆ ನೆಡೆಸಿದರು.
ಕರ್ನಾಟಕದಲ್ಲಿ ಕನ್ನಡ ಭಾಷೆ ಕಡ್ಡಾಯ. ಆದರೆ ಕೆಲವು ಅಂಗಡಿಗಳು ಇಂಗ್ಲಿಷ್ ನಾಮ ಫಲಕ ಅಳವಡಿಸಿದ್ದಾರೆ. ಇದು ಭಾಷೆಗೆ ಮಾಡುವ ಅನ್ಯಾಯವಾಗಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕನ್ನಡವನ್ನು ಸಂಪೂರ್ಣ ಆಡಳಿತ ಭಾಷೆಯನ್ನಾಗಿ ಜಾರಿಗೊಳಿಸಲು ವಿಫಲವಾಗಿವೆ. ನಗರದಲ್ಲಿ ಹಲವು ಮೊಬೈಲ್ ಕಂಪನಿಗಳ ಅಂಗಡಿಗಳಲ್ಲಿ ಇಂಗ್ಲಿಷ್ ನಾಮಫಲಕ ತೆರವುಗೊಳಿಸದಿದ್ದರೆ ನಾವೇ ತೆರವುಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಯಕರ್ನಾಟಕ ಜಿಲ್ಲಾ ಘಟಕದ ಅಧ್ಯಕ್ಷ ಯೋಗಣ್ಣ, ರವೀಂದ್ರ, ಸಿ.ಮಂಜುನಾಥ್, ವಿ.ನಿತಿನ್ ಕುಮಾರ್, ಎ.ಬಿ.ನಂದನ್, ಎನ್. ದರ್ಶನ್, ಕುಮಾರಸ್ವಾಮಿ, ವಿಶಾಲಾಕ್ಷಿ, ಎಂ.ಎಸ್.ಮಾಲತಿ ಹಾಗೂ ಇತರ ಪದಾಧಿಕಾರಿಗಳು ಹಾಜರಿದ್ದರು.