ಶ್ರೀರಂಗಪಟ್ಟಣ: ಇಂಗ್ಲಿಷ್ ವ್ಯಾಮೋಹದಿಂದಾಗಿ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದ್ದು, ಕನ್ನಡಪರ ಸಂಘಟನೆಗಳು ಮಾತೃಭಾಷೆ ಉಳಿಸಲು ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಸೋಮಶೇಖರ್ ಸಲಹೆ ನೀಡಿದರು.
ಪಟ್ಟಣದ ಯೂರೋ ಕ್ಲಾತಿಂಗ್ ಕಂಪೆನಿ ಆವರಣದಲ್ಲಿ ಗುರುವಾರ ಕನ್ನಡ ಸೇನೆ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕನ್ನಡ ಕೇವಲ ಭಾಷೆಯಲ್ಲ; ಅದೊಂದು ಜೀವನ ವಿಧಾನ. ಒಂದೂವರೆ ಸಾವಿರ ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ ನಗರ ಪ್ರದೇಶದಲ್ಲಿ ಸೊರಗುತ್ತಿದೆ. ಕಾನ್ವೆಂಟ್ ಸಂಸ್ಕೃತಿ ಹೆಚ್ಚುತ್ತಿರುವುದು ಕನ್ನಡಿಗರ ತಾಯಿ ಭಾಷೆಯ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಯೂರೋ ಕ್ಲಾತಿಂಗ್ ಕಂಪೆನಿಯ ಮ್ಯಾನೇಜರ್ ಮರೀಗೌಡ ಮಾತನಾಡಿ, ಕನ್ನಡಪರ ಸಂಘಟನೆಗಳು ಕನ್ನಡದ ಕೆಲಸದ ಜತೆಗೆ ಜನಪರ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಬೇಕು ಎಂದು ಹೇಳಿದರು. ಕಿರಣ್ ಕಶ್ಯಪ್ ಧ್ವಜಾರೋಹಣ ನೆರವೇರಿಸಿದರು. ಕನ್ನಡ ಸೇನೆ ತಾಲ್ಲೂಕು ಅಧ್ಯಕ್ಷ ಶಿವರಾಂ, ಸಂಚಾಲಕ ಬಸವರಾಜು, ಪ್ರಧಾನ ಕಾರ್ಯದರ್ಶಿ ದೀಪು, ಕುಮಾರ್, ರಂಜನ್ ಇದ್ದರು.