ಶ್ರೀರಂಗಪಟ್ಟಣ: ತಾವು ಮುಖ್ಯಮಂತ್ರಿಯಾಗಿದ್ದಾಗ, ರೈತರು ನದಿಗೆ ಇಳಿದು ಪ್ರತಿಭಟಿಸುತ್ತಿದ್ದಾರೆ ಎಂಬುದನ್ನೂ ಲೆಕ್ಕಿಸದೆ ತಮಿಳುನಾಡಿಗೆ ನೀರು ಹರಿಸಿದ ಮಾಜಿ ಪ್ರಧಾನಿ ದೇವೇಗೌಡ ಅವರು ಸಾಕ್ಷ್ಯಚಿತ್ರದ ನೆಪದಲ್ಲಿ ಕೆಆರ್ಎಸ್ಗೆ ಭೇಟಿ ನೀಡಿ ಕಾವೇರಿ ನದಿ ನೀರಿನ ವಿಷಯದಲ್ಲಿ ರಾಜಕಾರಣ ಮಾಡುವ ಯತ್ನ ನಡೆಸಿದ್ದಾರೆ ಎಂದು ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಟೀಕಿಸಿದರು.
ಪ್ರಧಾನಿಯಾಗಿದ್ದಾಗ ರಾಷ್ಟ್ರೀಯ ಜಲನೀತಿ ರೂಪಿಸಲು ದೇವೇಗೌಡರು ವಿಫಲರಾಗಿದ್ದಾರೆ. ಕಾವೇರಿ ನ್ಯಾಯ ಮಂಡಳಿಯ ಐತೀರ್ಪು ಹೊರ ಬಿದ್ದ ವೇಳೆ ತುಟಿ ಬಿಚ್ಚಲಿಲ್ಲ.
ಈಗ ರೈತರ ಪರ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಳೆದ 33 ವರ್ಷಗಳಿಂದ ರೈತರ ಹಿತಾಸಕ್ತಿಗೆ ಶ್ರಮಿಸುತ್ತಿದ್ದೇನೆ. ಅನ್ಯಾಯ, ಅಕ್ರಮಗಳ ವಿರುದ್ಧ ಹೋರಾಟ ನಡೆಸುತ್ತಿರುವ ನನಗೆ ಕ್ಷೇತ್ರದ ಮತದಾರರು ಬೆಂಬಲ ನೀಡಬೇಕು ಎಂದು ಕೋರಿದರು.
ರೈತ ಸಂಘದ ಅಧ್ಯಕ್ಷ ಕೆಂಪೇಗೌಡ, ಜಯರಾಮೇಗೌಡ, ಪಾಂಡು, ಕಡತನಳು ಬಾಬು, ಮಹದೇವು ಇದ್ದರು.