ಮಳವಳ್ಳಿ: ತಾಲ್ಲೂಕಿನ ಕಂದೇಗಾಲ ಸಮೀಪದ ಮತ್ತಿತಾಳೇಶ್ವರಸ್ವಾಮಿ ಷಷ್ಠಿ ರಥೋತ್ಸವ ಶುಕ್ರವಾರ ಅಸಂಖ್ಯ ಭಕ್ತರ ಸಮ್ಮುಖದಲ್ಲಿ ನಡೆಯಿತು. ಬೆಳಿಗ್ಗೆಯಿಂದ ತಾಲ್ಲೂಕು ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಭೇಟಿ ನೀಡಿ ಮೊದಲಿಗೆ ದೇವಾಲಯದಲ್ಲಿರುವ ದೇವರ ದರ್ಶನ ಪಡೆದು ನಂತರ ಹುತ್ತಕ್ಕೆ ತನಿ ಎರೆದು ಭಕ್ತಿ ಸಮರ್ಪಿಸಿದರು.
ಮಧ್ಯಾಹ್ನ ಸಂಪ್ರದಾಯದಂತೆ ದೇಗುಲದ ಆವರಣದಲ್ಲಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಕೊಳದ ಬಳಿಗೆ ತೆರಳಿ ಹೂವು ಹೊಂಬಾಳೆ ತೆಗೆದುಕೊಂಡು ಮಂಗಳವಾದ್ಯದೊಂದಿಗೆ ರಥಕ್ಕೆ ಪ್ರತಿಷ್ಠಾಪಿದರು. ಮಂಗಳಾರತಿ ಮಾಡುತ್ತಿದ್ದಂತೆ ಭಕ್ತರು ನಮಿಸಿ ಹಣ್ಣು ಎಸೆದು ಭಕ್ತಿಸಮರ್ಪಿಸಿದರು.
ತಹಶೀಲ್ದಾರ್ ಎಚ್.ಎಸ್. ದಿನೇಶ್ಚಂದ್ರ, ಉಪತಹಶೀಲ್ದಾರ್ ಶಿವಮೂರ್ತಿ, ಉಮೇಶ್ ಇದ್ದರು. ಸರ್ಕಲ್ ಇನ್ಸ್ಪೆಕ್ಟರ್ ಆರ್.ಶ್ರೀಕಾಂತ್ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.