ಪಾಂಡವಪುರ: ಗ್ರಾಮೀಣ ಪ್ರದೇಶದ ಯುವಕರು ಉದ್ಯೋಗಕ್ಕಾಗಿ ನಗರ ಪ್ರದೇಶದ ಕಡೆಗೆ ವಲಸೆ ಹೋಗುವುದನ್ನು ಬಿಟ್ಟು ರೇಷ್ಮೆ ಬೆಳೆಗಳಂತಹ ವಾಣಿಜ್ಯ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸದೃಢರಾಗಬೇಕೆಂದು ಜಿ.ಪಂ.ಸದಸ್ಯ ಎ.ಎಲ್.ಕೆಂಪೂಗೌಡ ಕರೆ ನೀಡಿದರು.
ಪಟ್ಟಣದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಸೋಮವಾರ ರೇಷ್ಮೆ ಇಲಾಖೆ ಆಯೋಜಿಸಿದ್ದ ಕೆಟಿಲಿಟಿಕ್ ಅಭಿವೃದ್ಧಿ ಯೋಜನೆಯಡಿ ರೇಷ್ಮೆ ಕೃಷಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ನೀಡಲಾಗುವ ಸವಲತ್ತುಗಳ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಳ್ಳಿಗಾಡಿನಲ್ಲಿ ಬೇಸಾಯದಿಂದ ಮಾತ್ರ ಜೀವನ ನಡೆಸಲು ಕಷ್ಟಕರವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಅನೇಕ ಯುವಕರು ಸರ್ಕಾರಿ ಉದ್ಯೋಗಕ್ಕಾಗಿ ಪರಿತಪಿಸುತ್ತಿದ್ದು, ನಗರ ಪ್ರದೇಶಗಳ ಕಡೆ ವಲಸೆ ಹೋಗುತ್ತಿದ್ದಾರೆ. ಇಂತಹ ಮನಸ್ಥಿತಿಯನ್ನು ಬಿಟ್ಟು ಕೃಷಿ ಚಟುವಟಿಕೆಗಳ ಜತೆಗೆ ವಾಣಿಜ್ಯ ಬೆಳೆಗಳನ್ನು ಬೆಳೆಯಬೇಕೆಂದು ಹೇಳಿದರು.
ಸರ್ಕಾರ ರೇಷ್ಮೆ ಬೆಳೆಯಲು ಕೇವಲ ಸಬ್ಸಿಡಿ ನೀಡಿದರೆ ಸಾಲದು ರೇಷ್ಮೆ ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಬೇಕು. ಕೇಂದ್ರ ಸರ್ಕಾರ ಆಗಾಗ್ಗೆ ಆಮದು ನೀತಿಯನ್ನು ಸರಿಯಾಗಿ ಅನುಸರಿಸುತ್ತಿಲ್ಲ. ಇಂತಹ ನೀತಿಯಿಂದಾಗಿ ಬೆಳೆಗಾರರು ಸಂಕಷ್ಟದಲ್ಲಿ ಸಿಲುಕಿಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.
ತಾ.ಪಂ. ಅಧ್ಯಕ್ಷೆ ಮಹಾಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯೆ ಮಂಜುಳ ಪರಮೇಶ್ ಮತ್ತು ವಿ.ವಸಂತ ಪ್ರಕಾಶ್ ಉದ್ಘಾಟಿಸಿದರು. ತಾ.ಪಂ. ಉಪಾಧ್ಯಕ್ಷ ಶಾಮಣ್ಣ, ಸದಸ್ಯೆ ಶೈಲಜಾ ಗೋವಿಂದರಾಜು, ರೇಷ್ಮೆ ಜಂಟಿ ನಿರ್ದೇಶಕ ಕೆಆರ್.ಲಕ್ಷ್ಮಿಕಾಂತ್ ರಾಜ ಅರಸ್, ರೇಷ್ಮೆ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಎಚ್.ರಾಜಪ್ಪ, ರೇಷ್ಮೆ ಉಪ ನಿರ್ದೇಶಕ ಶಾಂತರಾಜು, ಸಹಾಯಕ ನಿರ್ದೇಶಕ ನಟರಾಜು ಇತರರು ಉಪಸ್ಥಿತರಿದ್ದರು.