ಮಂಡ್ಯ: ಸಮಾಜದಲ್ಲಿ ಹಿರಿಯ ನಾಗರಿಕ ರನ್ನು ಗೌರವಿಸುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದು
ಉಪ ವಿಭಾಗಾಧಿಕಾರಿ ಅರುಳ್ಕುಮಾರ್ ಸಲಹೆ ನೀಡಿದರು.
ನಗರದಲ್ಲಿ ಜ್ಞಾನಸಿಂಧು ಎಜುಕೇಷನ್ ಅಂಡ್ ಕಲ್ಚರಲ್ ಸೊಸೈಟಿ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸೋಮವಾರ ಹಮ್ಮಿಕೊಂಡಿದ್ದ ಜ್ಞಾನಸಿಂಧು ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯರನ್ನು ಪಾಲನೆ ಮಾಡುವುದು ಮಕ್ಕಳ ಜವಾಬ್ದಾರಿ. ಇದಕ್ಕಾಗಿ ಸರ್ಕಾರ ಹೊಸ ಕಾಯ್ದೆ ರೂಪಿಸಿದೆ. ಈ ಕಾಯ್ದೆಯಡಿ ಹಿರಿಯ ನಾಗರಿಕರಿಗೆ ಕಿರುಕುಳ ನೀಡಿದರೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ಹಿರಿಯ ನಾಗರಿಕರು ಯೋಗಕ್ಷೇಮ ಕೇಂದ್ರಕ್ಕೆ ಬಂದು ವಿಶ್ರಾಂತಿ ಪಡೆದು ಹೋಗಬಹುದು. ಇಲ್ಲಿ ಕಾಫಿ-ತಿಂಡಿ, ಮಧ್ಯಾಹ್ನದ ಊಟ, ಸಂಜೆಯ ವೇಳೆ ಮತ್ತೆ ಕಾಫಿ ನೀಡಲು ಅವಕಾಶವಿದೆ. ಹಿರಿಯ ನಾಗರಿಕರು ಕೇಂದ್ರದ ಸದ್ಬಳಕೆ ಮಾಡಿಕೊಳ್ಳಬೇಕು. ಕೇಂದ್ರದ ಮೇಲ್ವಿಚಾರಕರು ಹಿರಿಯ ನಾಗರಿಕರಿಗೆ ಉತ್ತಮ ಸೇವೆ ನೀಡಬೇಕು ಎಂದು ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ರಾಜಮೂರ್ತಿ ಮಾತನಾಡಿ, ಹಿರಿಯ ನಾಗರಿಕರ ಉಪಯೋಗಕ್ಕೆ ಸರ್ಕಾರ ಯೋಗಕ್ಷೇಮ ಕೇಂದ್ರವನ್ನು ಆರಂಭಿಸಿದೆ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಮ್ಯಾಥ್ಯೂ, ಮಿಮ್ಸ್ ಉಪ ನಿರ್ದೇಶಕ ಡಾ.ಹರೀಶ್, ಪ್ರೊ.ನರಸಿಂಹಮೂರ್ತಿ, ಡಿ. ದೇವರಾಜ್ ಕೊಪ್ಪ, ಸಂಸ್ಥೆಯ ಮುಖ್ಯಸ್ಥ ಡಿ. ವಿಜಯ್ಕುಮಾರ್ ಉಪಸ್ಥಿತರಿದ್ದರು.
**
ವೃದ್ಧ ತಂದೆ–ತಾಯಿ ಯನ್ನು ನೋಡಿಕೊಳ್ಳಲು ಕಾನೂನು ರೂಪಿಸಬೇಕಾದ ಅನಿವಾರ್ಯತೆ ಬಂದಿರುವುದು ದುರಂತ. ಹೆತ್ತವರ ಕಡೆಗಣನೆ ವಿಷಾದನೀಯ. -ಎಸ್. ದಿವಾಕರ್, ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ