ಪಿರಿಯಾಪಟ್ಟಣ: ತಾಲ್ಲೂಕಿನ ಮಲ್ಲಿನಾಥಪುರದಲ್ಲಿ ಸೋಮವಾರ ಹಿಮ್ಮುಖವಾಗಿ ಚಲಿಸುತ್ತಿದ್ದ ಟ್ರಾಕ್ಟರ್ಗೆ ಸಿಲುಕಿದ ಬಾಲಕ ಮೃತಪಟ್ಟಿದ್ದಾನೆ.
ಗ್ರಾಮದ ಮಣಿಕಂಠ ಎಂಬುವರ ಪುತ್ರ ಹರಿಪ್ರಸಾದ್(13) ಮೃತ ಬಾಲಕ.
ಸೋಮವಾರ ಬೆಳಿಗ್ಗೆ ತನ್ನ ಮನೆ ಮುಂಭಾಗದ ಚಂದ್ರಮ್ಮ ಎಂಬುವವರ ಶೆಡ್ ಬಳಿ ಈತ ನಿಂತಿದ್ದಾಗ, ಹರೀಶ್ ಎಂಬಾತ ನಿರ್ಲಕ್ಷತನದಿಂದ ಟ್ರಾಕ್ಟರನ್ನು ಏಕಾಏಕಿ ಹಿಮ್ಮುಖವಾಗಿ ಚಲಾಯಿಸಿ, ಶೆಡ್ ಬಳಿ ನಿಂತಿದ್ದ ಬಾಲಕನಿಗೆ ಡಿಕ್ಕಿ ಹೊಡೆಸಿದ್ದಾನೆ.
ಡಿಕ್ಕಿಯ ರಭಸಕ್ಕೆ ಬಾಲಕ ಹರಿಪ್ರಸಾದ್ ತೀವ್ರವಾಗಿ ಗಾಯಗೊಂಡಿದ್ದು, ಕೂಡಲೇ ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ ಎಂದು ಪಿರಿಯಾಪಟ್ಟಣ ಪೊಲೀಸರು ತಿಳಿಸಿದರು.