ಮೈಸೂರು: ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ನೇತೃತ್ವದಲ್ಲಿ ಕಾರ್ಮಿಕರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ವ್ಯತ್ಯಸ್ಥ ತುಟ್ಟಿಭತ್ಯೆ ಪಾವತಿಯನ್ನು 2021ರ ಮಾರ್ಚ್ 31ರವರೆಗೆ ಮುಂದೂಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದೊಂದು ಕಾರ್ಮಿಕರ ವಿರೋಧಿ ನಡೆ ಎಂದು ಕಾರ್ಯಕರ್ತರು ಖಂಡಿಸಿದರು.
ತಿಂಗಳಿಗೆ ಅಲ್ಪ ಆದಾಯ ಇರುವ ಬಡ ಕಾರ್ಮಿಕರನ್ನು ಸರ್ಕಾರದ ಈ ನಿರ್ಧಾರವು ಸಂಕಷ್ಟಕ್ಕೆ ದೂಡುತ್ತದೆ. ಇನ್ನಾದರೂ, ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಅವರು ಒತ್ತಾಯಿಸಿದರು.
ಕೋವಿಡ್ ಕಾರಣದಿಂದ ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಂಡು ನರಳಾಡುತ್ತಿದ್ದಾರೆ. ಆದರೆ, ಸರ್ಕಾರ ಉದ್ಯೋಗ ನಾಶಕ್ಕೆ ಪೂರಕವಾದ ನಿಗದಿತ ಅವಧಿ ಕೆಲಸ ಸೇರಿದಂತೆ ಹಲವು ಕ್ರಮ ಕೈಗೊಳ್ಳುವ ಮೂಲಕ ಬಡಜನರ ಮೇಲೆ ಬರೆ ಎಳೆದಿದೆ ಎಂದು ಕಿಡಿಕಾರಿದರು.
ವೇತನ ಕಡಿತದಂತಹ ಕ್ರಮಗಳ ಮೂಲಕ ಬಡ ಕಾರ್ಮಿಕರ ವೇತನವನ್ನು ಲೂಟಿ ಮಾಡಿ ಕೈಗಾರಿಕೆಗಳ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿರುವುದು ಘೋರ ದುರಂತ ಎಂದು ವಿಶ್ಲೇಷಿಸಿದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶೇಷಾದ್ರಿ, ಉಪಪ್ರಧಾನ ಕಾರ್ಯದರ್ಶಿ ಎಚ್.ಬಿ.ರಾಮಕೃಷ್ಣ ಹಾಗೂ ಇತರರು ಇದ್ದರು.