ಮೈಸೂರು: ‘ಸಿನಿಮಾದಷ್ಟೇ ಪ್ರೇಕ್ಷಕರ ಆರೋಗ್ಯವೂ ನನಗೆ ಬಹಳ ಮುಖ್ಯ. ಕೋವಿಡ್–19 ಮುನ್ನೆಚ್ಚರಿಕೆಯ ಎಲ್ಲ ಕ್ರಮಗಳನ್ನು ಪಾಲಿಸಿ, ಚಲನಚಿತ್ರ ವೀಕ್ಷಿಸಿ’ ಎಂದು ಚಲನಚಿತ್ರ ನಟ ರಾಘವೇಂದ್ರ ರಾಜಕುಮಾರ್ ಪ್ರೇಕ್ಷಕ ಸಮೂಹಕ್ಕೆ ಮನವಿ ಮಾಡಿಕೊಂಡರು.
‘ರಾಜತಂತ್ರ’ ಸಿನಿಮಾ ಪ್ರಚಾರಕ್ಕಾಗಿ ಭಾನುವಾರ ಮೈಸೂರಿಗೆ ಬಂದಿದ್ದ ರಾಘವೇಂದ್ರ ಅವರು, ನಗರದ ಡಾ.ರಾಜಕುಮಾರ್ ಉದ್ಯಾನದಲ್ಲಿ, ರಾಜ್ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
‘ಸಿನಿಮಾ ಬಿಡುಗಡೆಯಾಗಿದೆ. ಪ್ರೇಕ್ಷಕರ ದರ್ಶನಕ್ಕಾಗಿ ಬಂದಿದ್ದೇನೆ. ಜನರು ಸಿನಿಮಾ ನೋಡಿ ಆಶೀರ್ವದಿಸಬೇಕು’ ಎಂದು ಮನವಿ ಮಾಡಿದರು.
‘ನೀವಿದ್ದರೆ ನಾವು. ಈ ವರ್ಷ ಕನ್ನಡ ಚಲನಚಿತ್ರ ರಂಗದ ಖ್ಯಾತ ನಟರ ಸಿನಿಮಾಗಳು ಬಿಡುಗಡೆಯಾಗಲಿವೆ. ಎಲ್ಲರ ಆರೋಗ್ಯ ಚೆನ್ನಾಗಿರಲಿ. ಕಳೆದ ವರ್ಷ ಕಳೆದುಕೊಂಡಿದ್ದು, ಈ ವರ್ಷ ಸಿಗುತ್ತೆ. ಯಾರೊಬ್ಬರು ನಂಬಿಕೆ ಕಳೆದುಕೊಳ್ಳಬೇಡಿ’ ಎಂದು ರಾಘವೇಂದ್ರ ರಾಜಕುಮಾರ್ ಹೇಳಿದರು.