ಮೈಸೂರು: ಮುಂಜಾನೆ–ಮುಸ್ಸಂಜೆ ಎರಡೂ ಹೊತ್ತಿನಿಂದ 35.650 ಕೆ.ಜಿ. ಹಾಲು ಕರೆದ ಇಲ್ಲಿನ ಲಷ್ಕರ್ ಮೊಹಲ್ಲಾದ ಅನ್ವರ್ ಷರೀಫ್ ಅವರ ಎಚ್ಎಫ್ ತಳಿಯ ಹಸು ಮೊದಲ ಬಹುಮಾನ ಪಡೆಯಿತು.
ರೈತ ದಸರಾ ಉಪಸಮಿತಿ ಗುರುವಾರ ಆಯೋಜಿಸಿದ್ದ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಈ ಹಸು ಹೆಚ್ಚು ಹಾಲು ನೀಡುವ ಮೂಲಕ ₹ 50,000 ನಗದು ಬಹುಮಾನವನ್ನು ತನ್ನ ಮಾಲೀಕ ಅನ್ವರ್ಗೆ ಗೆದ್ದುಕೊಟ್ಟಿತು.
ಬೆಂಗಳೂರು ಉತ್ತರದ ಕೆಂಗನಹಳ್ಳಿಯ ಸೌತಡ್ಕ ಗಣಪತಿ ಡೇರಿ ಫಾರಂನ ಹಸು ಎರಡೂ ಹೊತ್ತಿನಿಂದ 34.700 ಕೆ.ಜಿ. ಹಾಲು ನೀಡುವ ಮೂಲಕ ₹ 40,000 ದ್ವಿತೀಯ ಬಹುಮಾನವನ್ನು ಪಡೆಯಿತು.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಜನಿವಾರದ ಸಂತೋಷ್ ಅವರ ಹಸು ಸಹ 31.450 ಕೆ.ಜಿ. ಹಾಲು ನೀಡಿ ತೃತೀಯ ಬಹುಮಾನ ₹ 30,000 ನಗದನ್ನು ಮಾಲೀಕನಿಗೆ ಗೆದ್ದು ಕೊಟ್ಟಿತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಚಂದನ್ ಅವರ ಹಸು 29.800 ಕೆ.ಜಿ. ಹಾಲು ನೀಡುವ ಮೂಲಕ ನಾಲ್ಕನೇ ಸ್ಥಾನ ಪಡೆದು ₹ 10,000 ಬಹುಮಾನ ತನ್ನದಾಗಿಸಿಕೊಂಡಿತು.
ಸ್ಪರ್ಧೆಯಲ್ಲಿ ಬೆಂಗಳೂರು, ಮೈಸೂರು, ಹಾಸನ ಜಿಲ್ಲೆಯ ಒಂಬತ್ತು ಹಸುಗಳು ಪಾಲ್ಗೊಂಡಿದ್ದವು.