ಜಯಪುರ: ಹೋಬಳಿಯ ಬೀರಿಹುಂಡಿ ಗ್ರಾಮದ ರಸ್ತೆಗಳು ಮಳೆಯಿಂದ ಕೆಸರುಗದ್ದೆಯಂತಾಗಿದ್ದು, ಸಂಚಾರ ದುಸ್ತರವಾಗಿದೆ. ಅಲ್ಲಲ್ಲಿ ಗುಂಡಿಗಳು ಬಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಕಳೆದ ವಾರ ಸುರಿದ ಮಳೆಯಿಂದಾಗಿ ಗುಂಡಿಗಳಲ್ಲಿ ನೀರು ನಿಂತು ಪಾದಚಾರಿಗಳು ಓಡಾಡದಂತ ಸ್ಥಿತಿ ನಿರ್ಮಾಣವಾಗಿದೆ.
ಬೀರಿಹುಂಡಿಯಿಂದ ಡಿ.ಸಾಲುಂಡಿ ಸಮೀಪದ ಎಚ್.ಡಿ ಕೋಟೆ ಮುಖ್ಯರಸ್ತೆ ವರೆಗಿನ ಡಾಂಬರು ರಸ್ತೆ ಯೋಜನೆಗೆ ಮೂರು ವರ್ಷಗಳ ಹಿಂದೆ ಮೈಸೂರು ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಅನುದಾನ ಬಿಡುಗಡೆಯಾಗದೇ ಕಾಮಗಾರಿ ಅರ್ಧಕ್ಕೆ ನಿಂತಿದೆ.
‘ಹೋಬಳಿಯ ಅನಗಳ್ಳಿ, ಬೀರಿಹುಂಡಿಗೆ ಹೋಗುವ ರಸ್ತೆಯಲ್ಲಿ ಹಳ್ಳಗಳಾಗಿ ನೀರು ನಿಂತು ಕೆಸರುಮಯವಾಗಿವೆ. ವಾಹನ ಸವಾರರು ತೀವ್ರ ತೊಂದೆರೆ ಅನುಭವಿಸುವಂತಾಗಿದೆ. ಮಳೆ ಬಂದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ’ ಎಂದು ಸ್ಥಳೀಯ ನಿವಾಸಿ ಶ್ರೀನಿವಾಸ್ ದೂರಿದರು.
‘ರಸ್ತೆ ದುರಸ್ತಿಪಡಿಸುವಂತೆ ಹಲವು ಬಾರಿ ಜಿಲ್ಲಾ ಪಂಚಾಯಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಬೀರಿಹುಂಡಿ ಮುಖಂಡ ಸಿ.ಬಸವೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬೀರಿಹುಂಡಿಯಿಂದ ಗೋಪಾ ಲಪುರ ಸಂಪರ್ಕಿಸುವ ರಸ್ತೆ ಕಾಮಗಾರಿಯು ಪ್ರಾರಂಭವಾಗಿ ಅರ್ಧಕ್ಕೆ ನಿಂತಿದೆ. ಐದು ಕಡೆ ಡಕ್ ನಿರ್ಮಿಸಲಾಗಿದೆ. ಗುತ್ತಿಗೆದಾರರಿಗೆ ₹ 30 ಕೋಟಿ ಕಾಮಗಾರಿ ಹಣ ತಡೆ ಹಿಡಿದಿರುವುದರಿಂದ ರಸ್ತೆ ಕಾಮಗಾರಿಗೆ ಹಿನ್ನಡೆಯಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬೀರಿಹುಂಡಿ ಬಸವಣ್ಣ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.