ಮೈಸೂರು: ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಅವರು ವಿಜಯದ ಮಾಲೆ ಧರಿಸುತ್ತಿದ್ದಂತೆಯೇ, ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ಯರು ಸಂಭ್ರಮಾಚರಿಸಿದರು.
ಇಲ್ಲಿನ ಚಾಮರಾಜಪುರಂನಲ್ಲಿರುವ ಬಿಜೆಪಿ ನೂತನ ಕಚೇರಿಯಲ್ಲಿ ಬೆಳಿಗ್ಗೆಯಿಂದಲೇ ದೂರದರ್ಶನ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಇಲ್ಲಿ ಸೇರಿದ್ದ ನೂರಾರು ಕಾರ್ಯಕರ್ತರು ಕ್ಷಣ ಕ್ಷಣಕ್ಕೂ ಮತಎಣಿಕೆಯ ವಿವರ ಬರುತ್ತಿದ್ದಂತೆಯೇ ಸಂಭ್ರಮದಿಂದ ಚಪ್ಪಾಳೆ ತಟ್ಟಿ ಖುಷಿಪಡುತ್ತಿದ್ದರು.
ಮಧ್ಯಾಹ್ನ 3ರ ವೇಳೆಗೆ ಮತದ ಅಂತರ 1 ಲಕ್ಷ ದಾಟುತ್ತಿದ್ದಂತೆ, ಸಂಭ್ರಮಿಸಿದ ಕಾರ್ಯಕರ್ತರು ಸಿಹಿ ಹಂಚಿ ಜೈಕಾರ ಕೂಗಲು ಶುರುಮಾಡಿದರು. ಕಚೇರಿ ಮುಂಭಾಗ ಸೇರಿದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಗೆ ಜೈಕಾರ ಕೂಗಿದರು.
ಹಬ್ಬದಾಚರಣೆ: ನಜರಬಾದಿನ ವಿ.ಕೆ.ಫಂಕ್ಷನ್ ಹಾಲ್ನಲ್ಲಿ ಸೇರಿದ್ದ ‘ನಮೋ ಭಾರತ್’ನ ನೂರಾರು ಕಾರ್ಯಕರ್ತರು ಬೆಳಿಗ್ಗೆಯಿಂದಲೇ ಹಬ್ಬದ ಆಚರಣೆಯ ಮನಸ್ಥಿತಿಯಲ್ಲಿದ್ದರು. ಹಾಲ್ನಲ್ಲಿ ದೊಡ್ಡ ಪರದೆಯನ್ನು ಅಳವಡಿಸಿ ಟಿ.ವಿ ವೀಕ್ಷಣೆಗೆ ಅವಕಾಶ ಮಾಡಲಾಗಿತ್ತು.
ಸಂಜೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಕಚೇರಿಯ ಮುಂದೆ ಕಾರ್ಯಕರ್ತರು ಸೇರಿ ಸಿಹಿ ಹಂಚಿದರು. ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಪ್ರಾದೇಶಿಕ ಸಾರಿಗೆ ಕಚೇರಿ ಎದುರು ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು.
ರ್ಯಾಲಿ: ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿದರು. ಬಿಜೆಪಿ ಕಚೇರಿಯಿಂದ ಹೊರಟ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಘೋಷಣೆ ಕೂಗಿದರು.