ಮೈಸೂರು: ‘ಕೋಮುವಾದ–ಕೋಮುವಾದಿಗಳನ್ನು ಅಂತರ್ಗಾಮಿಗಳಾಗಿ ಅಳಿಸಿ ಹಾಕಬೇಕಿದೆ’ ಎಂದು ರೈತ ನಾಯಕಿ ಸುನಂದಾ ಜಯರಾಮ್ ಹೇಳಿದರು.
ದೇಸಿರಂಗ ಸಂಸ್ಥೆ ನಗರದ ಮನೆಯಂಗಳದಲ್ಲಿ ಭಾನುವಾರ ಏರ್ಪಡಿಸಿದ್ದ ‘ಪ್ರೊ.ಕೆ.ರಾಮದಾಸ್ ನೆನಪಿನಲಿ’ ಸಮಾರಂಭದಲ್ಲಿ ‘ಕೋಮು ಸೌಹಾರ್ದತೆ ಒಂದು ಚಿಂತನೆ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಇಂದಿನ ರಾಜಕಾರಣದ ಶುದ್ಧೀಕರಣ ಮತದಾರರಿಂದ ಆಗಬೇಕಿದೆ. ಆದರೆ ಮತದಾರರ ಮೆದುಳಿಗೆ ಏನಾಗಿದೆ’ ಎಂದು ಖಾರವಾಗಿ ಪ್ರಶ್ನಿಸಿದರು.
‘ಮೌಢ್ಯ ಮಿತಿ ಮೀರಿದೆ. ವಿಧಾನಸೌಧವನ್ನು ಇದು ಬಿಟ್ಟಿಲ್ಲ. ಮುಂಭಾಗ ಬದಲಿಸುವುದನ್ನು ಹೊರತುಪಡಿಸಿ, ಒಳಭಾಗದಲ್ಲಿ ಎಲ್ಲವನ್ನೂ ಬದಲಿಸಲಾಗಿದೆ’ ಎಂದು ಸುನಂದಾ ಅಸಮಾಧಾನ ವ್ಯಕ್ತಪಡಿಸಿದರು.
‘ಚಳವಳಿಗಳು ಸತ್ತಿಲ್ಲ. ಸಾಯಲೂಬಾರದು. ಗೌರಿ, ಡಾ.ಎಂ.ಎಂ.ಕಲಬುರ್ಗಿ ಹತ್ಯೆಕೋರರಿಗೆ ಇದೂವರೆಗೂ ಶಿಕ್ಷೆಯಾಗಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ಇದಕ್ಕಾಗಿ ಹೋರಾಟ ನಡೆಸಬೇಕಿದೆ’ ಎಂದು ಹೇಳಿದರು.
ಹಿರಿಯ ಪತ್ರಕರ್ತ ದಿನೇಶ್ ಅಮಿನ್ಮಟ್ಟು ಡೋಲು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚಲನಚಿತ್ರ ನಟ ಮಂಡ್ಯ ರಮೇಶ್ ಮೂವರಿಗೆ ಲೇಖನ ಪ್ರಶಸ್ತಿ ವಿತರಿಸಿದರು. ಚಿಂತಕ ಪ.ಮಲ್ಲೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದೇಸಿರಂಗ ಸಂಸ್ಥೆಯ ಕಾರ್ಯದರ್ಶಿ ಕೃಷ್ಣ ಜನಮನ ಪ್ರಾಸ್ತಾವಿಕ ನುಡಿಗಳನ್ನಾಡಿದರು.