ಕೊಪ್ಪ: ‘ಮಾಜಿ ಶಾಸಕ ಎನ್.ಚಲುವರಾಯಸ್ವಾಮಿ ಅವರಿಂದ ರಾಜಕೀಯ ಪಾಠ ಕಲಿಯಬೇಕಿಲ್ಲ. ಮತದಾರರು ನೀಡಿದ ಅಧಿಕಾರವನ್ನು ಮಾರಿಕೊಳ್ಳುವ ಸ್ಥಿತಿ ನನಗಿಲ್ಲ. ಚಲುವರಾಯಸ್ವಾಮಿ ಅವರಿಂದ ಸಮಿಶ್ರ ಸರ್ಕಾರ ಪತನವಾಗಿದೆ’ ಎಂದು ನಾಗಮಂಗಲ ಕ್ಷೇತ್ರದ ಶಾಸಕ ಕೆ.ಸುರೇಶ್ ಗೌಡ ಹೇಳಿದರು.
ಮರಳಿಗ ಗ್ರಾಮದ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾ.ಪಂ. ಚುನಾವಣೆಯಲ್ಲಿ ಕೊಪ್ಪದ ಕೆಲವು ಗ್ರಾ.ಪಂ. ಹೊರತುಪಡಿಸಿದರೆ ಇಡೀ ಕ್ಷೇತ್ರ ದಲ್ಲಿ ಜೆಡಿಎಸ್ ಜಯಬೇರಿ ಬಾರಿಸಿದೆ. ಇದನ್ನು ಸಹಿಸದವರು ಮನ ಬಂದಂತೆ ಮಾತನಾಡುತ್ತಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಾಲ ಮನ್ನಾ ಮಾಡಿಲ್ಲ, ಅದು ಯಾರಿಗೂ ತಲುಪಿಲ್ಲ ಎಂದು ಸಭೆಗಳಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಸಾಲ ಮನ್ನಾದ ಬಗ್ಗೆ ಮಾತನಾಡಲು ಚಲುವರಾಯಸ್ವಾಮಿ ಯಾರು. ₹ 24 ಸಾವಿರ ಕೋಟಿ ಸಾಲ ಮನ್ನಾ ವಾಗಿದೆ. ಸಾಲ ಮನ್ನಾ ಆಗಿರುವುದು ರೈತರಿಗೆ ತಿಳಿದಿದೆ ಎಂದರು.
ಸುಳ್ಳುಗಳನ್ನು ಸತ್ಯ ಮಾಡಲು ಅವರು ಹೊರಟಿದ್ದಾರೆ. ಚಲುವ ರಾಯಸ್ವಾಮಿ ಅವರು ಬೆಳಿಗ್ಗೆ ಕಾಂಗ್ರೆಸ್, ರಾತ್ರಿ ಬಿಜೆಪಿ ಜತೆಗಿದ್ದಾರೆ ಎಂದು ಹರಿಹಾಯ್ದರು.
ತಾ.ಪಂ. ಮಾಜಿ ಅಧ್ಯಕ್ಷೆ ಲಕ್ಷ್ಮಿ ಚನ್ನರಾಜು, ಜೆಡಿಎಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಬಿದರಕೋಟೆ ಕುಶ, ಸೋಮು, ಇಂದುಶೇಖರ್, ಕೃಷ್ಣೇಗೌಡ, ಪುಟ್ಟಸ್ವಾಮಿ, ನಂಜೇ ಗೌಡ, ಶಿವಮಾದು, ನಂದೀಶ ಇದ್ದರು.