ಮೈಸೂರು: ಪಾಲಿಕೆಯಿಂದ ಬಾಕಿಯಿರುವ ಹಣ ಶೀಘ್ರ ಬಿಡುಗಡೆ ಮಾಡುವಂತೆ ಒತ್ತಡ ಹೇರಲು ಗುತ್ತಿಗೆದಾರರು ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದಾರೆ.
ಪಾಲಿಕೆಯಿಂದ ಗುತ್ತಿಗೆದಾರರಿಗೆ ₹ 130 ಕೋಟಿ ಬಾಕಿಯಿದೆ. ಅದನ್ನು ನೀಡುವಂತೆ ಹಲವು ಸಲ ಮನವಿ ಮಾಡಿದ್ದರೂ, ಬಿಡುಗಡೆ ಆಗಿಲ್ಲ. ಇದರಿಂದ ಶನಿವಾರದಿಂದ ಕೆಲಸ ನಿಲ್ಲಿಸಿದ್ದಾರೆ.
‘ಪಾಲಿಕೆಯು ಗುತ್ತಿಗೆದಾರರಿಗೆ ನೀಡಬೇಕಿರುವ ಹಣವನ್ನು 2018 ರಿಂದಲೂ ಬಾಕಿ ಉಳಿಸಿಕೊಂಡಿದೆ. ಹಲವು ಸಲ ಮನವಿ ಮಾಡಿದರೂ ಬಾಕಿ ಬಿಡುಗಡೆಮಾಡಿಲ್ಲ’ ಎಂದು ಪಾಲಿಕೆ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ವೆಂಕಟಪ್ಪ ತಿಳಿಸಿದ್ಧಾರೆ.
‘₹ 130 ಕೋಟಿಯಲ್ಲಿ ಕೇವಲ ₹ 6 ಕೋಟಿ ನೀಡುವುದಾಗಿ ಪಾಲಿಕೆ ಹೇಳಿದೆ. ಆದರೆ ಅಷ್ಟು ಕಡಿಮೆ ಹಣ ನೀಡಿದರೆ ಸಾಲದು. ಎಲ್ಲ ಬಾಕಿ ನೀಡಬೇಕು’ ಎಂದರು.
‘ಪಾಲಿಕೆಯಡಿ ನಡೆಸುವ ಎಲ್ಲ ಕೆಲಸಗಳನ್ನು ಅ.3 ರಿಂದ ನಿಲ್ಲಿಸಿದ್ದೇವೆ. ಸೋಮವಾರ ಈ ಸಂಬಂಧ ಸಭೆ ನಡೆಸಿ ಮೇಯರ್ ಮತ್ತು ಆಯುಕ್ತರಿಗೆ ಮತ್ತೆ ಮನವಿ ಮಾಡಲಾಗುವುದು. ಆ ಬಳಿಕ ಮುಂದಿನ ಹೋರಾಟದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.