ಮೈಸೂರು: ರೈತರು ಸಿರಿವಂತರಾಗಬೇಕು ಎಂದು ಅರಣ್ಯ ಮತ್ತು ಪರಿಸರ ಇಲಾಖೆಯ ನಿವೃತ್ತ ಕಾರ್ಯದರ್ಶಿ ಎ.ಸಿ.ಲಕ್ಷ್ಮಣ್ ತಿಳಿಸಿದರು.
ಅರಣ್ಯ ಪರಿಸರ ಮತ್ತು ಯೋಗ ಪ್ರತಿಷ್ಠಾನದ ಹಾಗೂ ಸಾಮಾಜಿಕ ಅರಣ್ಯ ವಿಭಾಗದ ವತಿಯಿಂದ ಶುಕ್ರವಾರ ಚಾಮರಾಜೇಂದ್ರ ಮೃಗಾಲಯದಲ್ಲಿ ನಡೆದ ವನ ತೋಟಗಾರಿಕೆಗೆ ಸಂಬಂಧಿಸಿದಂತೆ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರದ ಬಿದಿರು ಯೋಜನೆ ದೂರದರ್ಶಿತ್ವ ಹೊಂದಿಲ್ಲ. ಇದಕ್ಕೆ ಕಟಾವು, ಮಾರುಕಟ್ಟೆ ಹೇಗೆ ಎಂಬ ವಿಚಾರದಲ್ಲಿ ಸ್ಪಷ್ಟತೆ ಇಲ್ಲ. ಮೊದಲು ರೈತರಿಗೆ ಯಾವ ಮರ ಬೇಕೋ ಆ ಮರವನ್ನು ನೀಡಬೇಕು ಎಂದು ಅವರು ತಿಳಿಸಿದರು.
ಕೊಳ್ಳೇಗಾಲದ ಪ್ರಗತಿಪರ ರೈತ ಗೌತಮ್ ಕದಮ್ ಅವರು ಮಾತನಾಡಿ, ‘200 ಎಕರೆ ಪ್ರದೇಶದಲ್ಲಿ 8 ಸಾವಿರ ಹೆಬ್ಬೇವಿನ ಸಸಿಗಳನ್ನು ಬೆಳೆಸಲಾಗಿದೆ. 10 ವರ್ಷದ ನಂತರ ಕಟಾವಾಗಿದೆ. 1 ಮರಕ್ಕೆ ₹ 10 ಸಾವಿರ ಸಿಕ್ಕಿದೆ. ಮೊದಲ ಮೂರು ವರ್ಷ ನೀರು ನೀಡಿ ಸಲಹಿದರೆ ಸಾಕು’ ಎಂದು ಹೇಳಿದರು.
ಪ್ರಗತಿಪರ ರೈತರಾದ ಚೆನ್ನಬಸಪ್ಪ ಗಾವಡಗೆರೆ, ಗೌತಮ್ ಕದಮ್, ಉದ್ಯಮಿಗಳಾದ ಫಿರೋಜ್ಖಾನ್, ಸಿರಾಜ್ಖಾನ್ ಸಾಮಿಲ್, ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಹಾಗೂ ಕರಕುಶಲ ಕೈಗಾರಿಕಾ ಸಂಘದ ಅಧ್ಯಕ್ಷ ರಾಮಣ್ಣ ಅವರನ್ನು ಸನ್ಮಾನಿಸಲಾಯಿತು.
ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ಕುಲಕರ್ಣಿ, ಡಿಸಿಎಫ್ಗಳಾದ ಪ್ರಶಾಂತಕುಮಾರ್, ಅಲೆಕ್ಸಾಂಡರ್, ಭಾನುಪ್ರಕಾಶ್ ಇದ್ದರು.