ಮೈಸೂರು: ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಗಳು ರೈತರ ಪಾಲಿಗೆ ಮರಣ ಶಾಸನವಾಗಿವೆ ಎಂದು ಆರೋಪಿಸಿ, ಇಲ್ಲಿನ ಚಾಮುಂಡಿಬೆಟ್ಟದ ಪಾದದಲ್ಲಿರುವ ಸ್ಮಶಾನದಲ್ಲಿ ಗುರುವಾರ ರೈತರ ಅಣಕು ಶವಯಾತ್ರೆ ನಡೆಸಿ, ಪ್ರತಿಕೃತಿಯನ್ನು ಹೂಳುವ ಮೂಲಕ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ನೇತೃತ್ವದಲ್ಲಿ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಸೇರಿದಂತೆ ಹಲವು ಮುಖಂಡರು ಇದರಲ್ಲಿ ಭಾಗಿಯಾದರು.
ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಪ್ರತಿಕ್ರಿಯಿಸಿ, ‘ರೈತರ ಪರಿಸ್ಥಿತಿಯನ್ನು ಈ ಅಣಕು ಶವಯಾತ್ರೆ ಪ್ರತಿಬಿಂಬಿಸಿದೆ. ಕೇಂದ್ರ ಸರ್ಕಾರದವರು ಕಠಿಣ ಹೃದಯದವರಾಗಿದ್ದಾರೆ. ಯಾರ ಮರ್ಜಿಯಲ್ಲಿದ್ದಾರೋ ಗೊತ್ತಿಲ್ಲ. ರೈತರಿಗೆ ಬೇಡವಾದ ಕಾಯ್ದೆಗಳನ್ನು ಹಠ ಬಿಟ್ಟು ವಾಪಸ್ ಪಡೆಯಬೇಕು’ ಎಂದು ಒತ್ತಾಯಿಸಿದರು.
ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು, ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷ ಮೂಗೂರ ನಂಜುಂಡಸ್ವಾಮಿ, ಮುಖಂಡರಾದಆರ್.ಕೆ.ರವಿ, ಎಂ.ಮಹೇಂದ್ರ ಕಾಗಿನೆಲೆ, ಡಾ.ಮಹೇಶ್, ಪಿ.ರಾಜು ಇದ್ದರು.