ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಶೇ 99ರಷ್ಟು ಮುಂಗಾರುಪೂರ್ವ ಮಳೆ

ಜಿಲ್ಲೆಯಲ್ಲಿ 44,511 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ
Last Updated 7 ಮೇ 2020, 5:30 IST
ಅಕ್ಷರ ಗಾತ್ರ

ಮೈಸೂರು: ಈ ಬಾರಿ ಪೂರ್ವ ಮುಂಗಾರು ಮಳೆಯು ವಾಡಿಕೆಯಷ್ಟು ಬಿದ್ದಿದ್ದು, ಕೇವಲ 1 ಮಿ.ಮೀನಷ್ಟು ಮಳೆಯ ಕೊರತೆ ಮಾತ್ರ ಉಂಟಾಗಿದೆ. ಶೇ 99ರಷ್ಟು ಮಳೆ ಬಿದ್ದಿರುವುದರಿಂದ ಎಲ್ಲೆಡೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಈಗಾಗಲೇ 44,511 ಹೆಕ್ಟೇರ್ ಪ್ರದೇಶದಲ್ಲಿ ರೈತರು ಬಿತ್ತನೆಯನ್ನು ಪೂರ್ಣಗೊಳಿಸಿದ್ದಾರೆ.

ಕಳೆದ ವರ್ಷ ಪೂರ್ವಮುಂಗಾರು ಮಳೆಯು ಈ ಬಾರಿಗಿಂತಲೂ ಹೆಚ್ಚು ಅಬ್ಬರಿಸಿತ್ತು. 89 ಮಿ.ಮೀನಷ್ಟು ಬೀಳಬೇಕಾದ ಮಳೆ ಬರೋಬರಿ 133 ಮಿ.ಮೀನಷ್ಟು ಸುರಿದಿತ್ತು. ನಿರೀಕ್ಷೆಗಿಂತಲೂ ಹೆಚ್ಚಿನ ಮಳೆಯಾಗಿತ್ತು. ಆದರೆ, ಈ ಬಾರಿ ಅಷ್ಟು ಪ್ರಮಾಣದಲ್ಲಿ ಮಳೆಯಾಗದಿದ್ದರೂ, ತೀರಾ ನಿರಾಸೆಯಾಗುವ ಹಂತದಲ್ಲೇನೂ ಪರಿಸ್ಥಿತಿ ಇಲ್ಲ. 88 ಮಿ.ಮೀನಷ್ಟು ಮಳೆಯಾಗಿರುವುದರಿಂದ ಬಿತ್ತನೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಹಾಂತಪ್ಪ ಹೇಳುತ್ತಾರೆ.

ಈ ಬಾರಿ ಎಲ್ಲೆಡೆ ಒಂದೇ ಪ್ರಮಾಣದಲ್ಲಿ ಮಳೆಯಾಗದೇ ಇರುವುದು ಕೊಂಚ ಸಮಸ್ಯೆ ಎನಿಸಿದೆ. ತಿ.ನರಸೀಪುರ, ನಂಜನಗೂಡು, ಎಚ್.ಡಿ.ಕೋಟೆ ಭಾಗಗಳಲ್ಲಿ ಅಧಿಕ ಮಳೆಯಾಗಿದೆ. ಕೆಲವೆಡೆ ಹೆಚ್ಚಿನ ಮಳೆಯಾಗಿಲ್ಲ. ಈ ವಾರವೂ ಅಲ್ಲೆಲ್ಲ ಮಳೆಯಾದರೆ ಬಿತ್ತನೆಕಾರ್ಯ ಇನ್ನಷ್ಟು ಚುರುಕುಗೊಳ್ಳಬಹುದು ಎಂಬುದು ಕೃಷಿ ಇಲಾಖೆಯ ನಿರೀಕ್ಷೆಯಾಗಿದೆ.

ಬಿತ್ತನೆಯಲ್ಲಿ ಹೆಸರುಕಾಳನ್ನೇ ಬಹುತೇಕ ರೈತರು ಈ ಬಾರಿ ಆರಿಸಿಕೊಂಡಿದ್ದಾರೆ. ನಿರೀಕ್ಷೆಯಲ್ಲಿ ಶೇ 51ರಷ್ಟು ಇದು ಪೂರ್ಣಗೊಂಡಿದೆ. ಇದನ್ನು ಬಿಟ್ಟರೆ ಹತ್ತಿ ಬೆಳೆಯ ಕಡೆಗೂ ರೈತರು ಹೆಚ್ಚಿನ ಆಸಕ್ತಿ ತಳೆದಿದ್ದಾರೆ. ಒಟ್ಟು ನಿರೀಕ್ಷೆಯಲ್ಲಿ ಶೇ 42ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ಕೃಷಿ ಇಲಾಖೆಯ ಅಂಕಿಅಂಶಗಳು ಹೇಳುತ್ತವೆ.

ಮಳೆ ಮತ್ತು ಬಿತ್ತನೆಯ ಪ್ರಮಾಣ

ಪೂರ್ವಮುಂಗಾರು ಮಳೆಯು ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ವಾಡಿಕೆಯಷ್ಟು ಬಿದ್ದಿದ್ದು, ಎಲ್ಲೆಡೆ ಬಿತ್ತನೆ ಕಾರ್ಯ ಚುರುಕುಗೊಂಡಿದೆ. 44,511 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಈಗಾಗಲೇ ನಡೆದಿದೆ. ಉಳಿದ ಕಡೆ ಬಿತ್ತನೆಗೆ ಭೂಮಿಯನ್ನು ಹಸನು ಮಾಡುವ ಕಾರ್ಯದಲ್ಲಿ ರೈತರು ನಿರತರಾಗಿದ್ದಾರೆ.

89 ಮಿ.ಮೀ– ಮಳೆಯ ನಿರೀಕ್ಷೆ‌,88 ಮಿ.ಮೀ– ಬಿದ್ದಿರುವ ಮಳೆಯ ಪ್ರಮಾಣ,133 ಮಿ.ಮೀ– ಕಳೆದ ವರ್ಷ ಬಿದ್ದ ಮಳೆಯ ಪ್ರಮಾಣ,3.95 ಲಕ್ಷ ಹೆಕ್ಟೇರ್– ಬಿತ್ತನೆ ಗುರಿ,44,511 ಹೆಕ್ಟೇರ್– ಬಿತ್ತನೆಯಾದ ಪ್ರದೇಶ,1,610 ಕ್ವಿಂಟಲ್‌ – ರೈತ ಸಂಪರ್ಕ ಕೇಂದ್ರಗಳಿಂದ ಬಿತ್ತನೆ ಬೀಜ ಮಾರಾಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT