ಮೈಸೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು ಅವರು ತಮ್ಮ ಜನ್ಮದಿನಾಚರಣೆಯನ್ನು ಮಂಗಳವಾರ ಇಲ್ಲಿನ ಚಾಮುಂಡಿಬೆಟ್ಟದ ಪಾದದಲ್ಲಿರುವ ಸುಡುವ ಸ್ಮಶಾನದಲ್ಲಿ ಆಚರಿಸಿಕೊಂಡರು.
ವೀರಶೈವ ರುದ್ರಭೂಮಿಯಲ್ಲಿ ಕಾರ್ಯನಿರ್ವಹಿಸುವ ನೀಲಮ್ಮ, ಟಿ.ಕೆ. ಬಡಾವಣೆಯ ಕೆ.ಪರಮೇಶ್, ಜಯನಗರದ ಪ್ರಕಾಶ್, ಮಹದೇವ ಹಾಗೂ ಸುಡುವ ಸ್ಮಶಾನದ ಬಸವಣ್ಣ ಅವರನ್ನು ಇದೇ ವೇಳೆ ಅವರು ಸನ್ಮಾನಿಸಿದರು. ಸ್ಮಶಾನದಲ್ಲಿ ಕೆಲಸ ಮಾಡುವ ಸುಮಾರು 30 ಮಂದಿ ಸೇರಿದಂತೆ ಒಟ್ಟು 100 ಮಂದಿಗೆ ಆಹಾರ ಕಿಟ್ ವಿತರಿಸಿದರು.
ಈ ವೇಳೆ ಮಾತನಾಡಿದ ಶಿವರಾಮ್, ‘ಜನರು ಮೌಢ್ಯವನ್ನು ಮೆಟ್ಟಿ ನಿಲ್ಲುವ ಅಗತ್ಯ ಇದೆ’ ಎಂದು ಹೇಳಿದರು.
ಈಗ ಕೊರೊನಾಕ್ಕೂ ದೇಗುಲ ಕಟ್ಟಲಾಗುತ್ತಿದೆ. ಜನರು ಮೌಢ್ಯದ ಕಡೆಗೆ ಹೆಚ್ಚು ವಾಲುತ್ತಿದ್ದಾರೆ. ಜನ ಮಾನಸದಲ್ಲಿ ಮೌಢ್ಯವನ್ನು ತೊಲಗಿಸಿ, ವೈಚಾರಿಕ ಚಿಂತನೆಗಳನ್ನು ಮೂಡಿಸಲು ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.
ವೈದ್ಯರು, ಶುಶ್ರೂಷಕರು ದೇವರಿದ್ದಂತೆ. ಸತ್ತ ಮೇಲೆ ಮನುಷ್ಯನ ದೇಹಕ್ಕೆ ಗೌರವಯುತವಾದ ಅಂತಿಮ ವಿಧಿವಿಧಾನ ನೆರವೇರಿಸುವ ಸ್ಮಶಾನದ ನೌಕರರು ಸಹ ದೇವರಿದ್ದಂತೆ. ಇವರಿಗೆ ಗೌರವ ಸಮರ್ಪಿಸುವ ಮೂಲಕ ಜನ್ಮದಿನವನ್ನು ಆಚರಿಸಿಕೊಳ್ಳಲಾಯಿತು ಎಂದರು.
ಮಾಜಿ ಶಾಸಕ ವಾಸು ಮಾತನಾಡಿ, ‘ಸ್ಮಶಾನದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರನ್ನು ಗೌರವಿಸುವ ಮೂಲಕ ಕೆ.ಎಸ್.ಶಿವರಾಮು ಜನ್ಮದಿನ ಆಚರಿಸಿಕೊಳ್ಳುತ್ತಿರುವುದು ನಿಜಕ್ಕೂ ಸಾರ್ಥಕ. ಸಮಾಜದಲ್ಲಿನ ಮೌಢ್ಯಾಚರಣೆ ವಿರುದ್ಧ ಇವರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.
ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕಾಂಗ್ರೆಸ್ ಮುಖಂಡ ಕೆ.ಮರೀಗೌಡ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಇದ್ದರು.