ಮೈಸೂರು: ಮೈಸೂರು ಕೈಗಾರಿಕೆಗಳ ಸಂಘ ವತಿಯಿಂದ ಡಿ. 18ರಂದು ವಿದ್ಯಾವಿಕಾಸ ಕಾಲೇಜಿನ ಲಲಿತಾ ಸ್ಮಾರಕ ಭವನದಲ್ಲಿ ಸಣ್ಣ ಉದ್ಯಮಗಳ ಸರಬರಾಜಿನ ಬಾಕಿ ವಸೂಲಿ ಕಾಯ್ದೆ ಹಾಗೂ ಸೂಕ್ಷ್ಮ ಉದ್ಯಮಗಳ ಸೌಲಭ್ಯ ಪರಿಷತ್ತಿನ ಸಾಮರ್ಥ್ಯದ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ವಾಸು ತಿಳಿಸಿದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ ಅವರು ಕಾರ್ಯಕ್ರಮ ಉದ್ಘಾಟಿಸುವರು. ಪ್ರಭಾರಿ ನಿರ್ದೇಶಕ ಎಚ್.ಎಂ.ಶ್ರೀನಿವಾಸು, ಉಪನಿರ್ದೇಶಕ ಪಿಯೂಷ್ ಅಗರವಾಲ್, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆರ್.ರಾಜು, ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಮಿತಿ ಅಧ್ಯಕ್ಷ ರವಿ ಕೋಟಿ ಭಾಗವಹಿಸುವರು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಸಣ್ಣ ಕೈಗಾರಿಕೆಗಳು ಬಾಕಿ ವಸೂಲಿ ಸಮಸ್ಯೆಯಿಂದ ಬಳಲುತ್ತಿವೆ. ಅನೇಕ ಕೈಗಾರಿಕೆಗಳು ಇದೇ ಸಮಸ್ಯೆಯಿಂದ ಮುಚ್ಚಿಹೋಗಿರುವ ಉದಾಹರಣೆಗಳೂ ಇವೆ. ಇದಕ್ಕೆ ಪರಿಹಾರವಾಗಿ ಬಾಕಿ ವಸೂಲಿ ಕಾಯ್ದೆ ರೂಪಿಸಲಾಗಿದೆ. ಯಾವುದೇ ಉತ್ಪನ್ನವನ್ನು ಗ್ರಾಹಕರಿಗೆ ನೀಡಿದ 45 ದಿನಗಳಲ್ಲಿ ಹಣ ಪಾವತಿ ಆಗದೇ ಇದ್ದಲ್ಲಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಮಿತಿಗೆ ದೂರು ನೀಡಿದಲ್ಲಿ ಬ್ಯಾಂಕ್ ಬಡ್ಡಿ ದರದ ಮೂರು ಪಟ್ಟು ದಂಡ ವಿಧಿಸಿ ಹಣ ವಸೂಲಿ ಮಾಡುವ ಅವಕಾಶವಿದೆ. ಈ ವಿಚಾರವನ್ನು ಉದ್ದಿಮೆದಾರರಿಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.
ರಾಜ್ಯದಲ್ಲಿ ಒಟ್ಟು ನಾಲ್ಕು ವಿಭಾಗಗಳನ್ನು ಇದಕ್ಕಾಗಿ ರಚಿಸಲಾಗಿದೆ. ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರ್ಗಿ ಸಮಿತಿಗಳು ದೂರು ಸ್ವೀಕರಿಸಿ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುತ್ತವೆ. ಆದರೆ, ಈ ವಿಚಾರ ಹಲವು ಉದ್ಯಮಿಗಳಿಗೆ ತಿಳಿದೇ ಇಲ್ಲ. ಸಾಲ ಮಾಡಿ ಬಂಡವಾಳ ಹೂಡಿ ಉದ್ಯಮ ಆರಂಭಿಸಿ, ನಷ್ಟದಿಂದ ಮುಚ್ಚುವ ನಿರ್ಧಾರಕ್ಕೆ ಬರುತ್ತಿದ್ದಾರೆ. ಹಾಗಾಗಿ, ಈ ಅರಿವು ಕಾರ್ಯಕ್ರಮದಲ್ಲಿ ಎಲ್ಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
‘ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಅನೇಕ ಪ್ರಚಲಿತ ವಿದ್ಯಮಾನಗಳು ಘಟಿಸುತ್ತಿವೆ. ಇವನ್ನು ತಿಳಿದುಕೊಳ್ಳುವುದು ಉದ್ಯಮ ನಡೆಸುವಷ್ಟೇ ಮುಖ್ಯವಾದುದು. ಈ ನಿಟ್ಟಿನಲ್ಲಿ ನಮ್ಮ ಸಂಘವು ಹಲವು ಅರಿವು ಕಾರ್ಯಕ್ರಮಗಳನ್ನು ನಿರಂತರವಾಗಿ ರೂಪಿಸುತ್ತಿದೆ’ ಎಂದರು.
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಕುಲಕರ್ಣಿ, ಪ್ರತಿನಿಧಿಗಳಾದ ಅರಸಪ್ಪ, ಸತೀಶ್, ಮೈಸೂರು ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಸುರೇಶ್ಕುಮಾರ್ ಜೈನ್, ಖಜಾಂಚಿ ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.