ಮೈಸೂರು: ಸರ್ಕಾರ ಒಕ್ಕಲಿಗ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು ಎಂದು ಒಕ್ಕಲಿಗರ ಸಂಘದ (ಮೈಸೂರು, ಚಾಮರಾಜನಗರ ಜಿಲ್ಲೆ) ಅಧ್ಯಕ್ಷ ಜಿ.ಮಂಜು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸರ್ಕಾರ ಕೈಗೊಂಡಿರುವ ನಿರ್ಧಾರ ಸರಿಯಾಗಿದೆ. ಇದರಿಂದ ವೀರಶೈವ ಲಿಂಗಾಯತರಲ್ಲಿ ಹಿಂದುಳಿದವರ ಅಭಿವೃದ್ಧಿ ಸಾಧ್ಯ. ಒಕ್ಕಲಿಗ ಸಮುದಾಯದಲ್ಲೂ ಅನೇಕ ಮಂದಿ ಹಿಂದುಳಿದಿದ್ದಾರೆ ಎನ್ನುವುದನ್ನು ಸರ್ಕಾರ ಮರೆಯಬಾರದು ಎಂದು ಹೇಳಿದರು.
ಒಕ್ಕಲಿಗರು ಇಂದಿಗೂ ವ್ಯವಸಾಯವನ್ನೇ ನಂಬಿಕೊಂಡಿದ್ದಾರೆ. ತೀರಾ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಇವರಿಗೆ ಸದ್ಯ ನೀಡಲಾಗುತ್ತಿರುವ ಮೀಸಲಾತಿ ಏನೇನೂ ಸಾಲದಾಗಿದೆ. ಸರ್ಕಾರ ಕೂಡಲೇ ನಗರ ಪ್ರದೇಶದಲ್ಲಿ ವಾಸಿಸುವ ಒಕ್ಕಲಿಗರೂ ಒಳಗೊಂಡಂತೆ ಶೇ 15ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ಸರ್ಕಾರ ಒಕ್ಕಲಿಗ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸದೇ ಹೋದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಶೀಘ್ರದಲ್ಲೇ ಒಕ್ಕಲಿಗ ಸಮುದಾಯದ ಸಚಿವರು, ಸಂಸದರು, ಶಾಸಕರೊಂದಿಗೆ ಸಭೆಯನ್ನು ಆಯೋಜಿಸಿ, ಹೋರಾಟದ ರೂಪರೇಷೆಗಳನ್ನು ನಿರ್ಧರಿಸಲಾಗುವುದು ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಪಿ.ಬೋರೇಗೌಡ, ಗೌರವಾಧ್ಯಕ್ಷ ಬಿ.ಕುಮಾರಗೌಡ, ಉಪಾಧ್ಯಕ್ಷ ಎಸ್.ಗುರುರಾಜ್, ಖಜಾಂಚಿ ಎಂ.ಎ.ಸುಶೀಲಾ ನಂಜಪ್ಪ, ನಿರ್ದೇಶಕರಾದ ಎಂ.ಎ.ನಂಜಪ್ಪ, ಬಿ.ಇ.ಗಿರೀಶ್ಗೌಡ ಇದ್ದರು.