ಮೈಸೂರು: ‘ಮಹಾತ್ಮನನ್ನೇ ಕೊಂದವನ ಸ್ಫೂರ್ತಿ ಹೊಂದಿದವರು ಇದೀಗ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಇವರಿಂದ ದೇಶಕ್ಕೆ ಗಂಡಾಂತರ ಕಾದಿದೆ. ಸ್ವಾತಂತ್ರ್ಯ ಚಳವಳಿಗಿಂತ ದೊಡ್ಡ ಹೋರಾಟಕ್ಕೆ ಜನರು ಸಿದ್ಧರಾಗಬೇಕಿದೆ’ ಎಂದು ಜನಾಂದೋಲನ ಮಹಾಮೈತ್ರಿಯ ಸಂಚಾಲಕ ಎಸ್.ಆರ್.ಹಿರೇಮಠ ಮಂಗಳವಾರ ಇಲ್ಲಿ ತಿಳಿಸಿದರು.
‘ಕೇಂದ್ರ–ರಾಜ್ಯ ಸರ್ಕಾರದ ಆಡಳಿತಕ್ಕೆ ಕನ್ನಡಿ ಹಿಡಿದವರನ್ನೇ ದೇಶದ್ರೋಹಿಗಳು ಎನ್ನುವ ಉದ್ದಟತನ ಪ್ರದರ್ಶನಗೊಳ್ಳುತ್ತಿದೆ. ಹೊಸದಿಲ್ಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರ ಕಷ್ಟ ಈ ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ. ಲಾಕ್ಡೌನ್ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಜನ ವಿರೋಧಿ ನೀತಿಗಳನ್ನು ರಾತ್ರೋ ರಾತ್ರಿ ಜಾರಿ ಮಾಡಿದ್ದಾರೆ. ಅನ್ನದಾತರನ್ನೇ ದೇಶದ್ರೋಹಿಗಳು ಎನ್ನುತ್ತಿದ್ದಾರೆ. ಇಷ್ಟಾದರೂ ಜನ ಮೌನವಾಗಿರುವುದು ಸರಿಯಲ್ಲ’ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಕಿಡಿಕಾರಿದರು.
‘ಜನರನ್ನು ಜಾಗೃತಿಗೊಳಿಸಲುಜನಾಂದೋಲನ ಮಹಾಮೈತ್ರಿ ಮುಂದಾಗಿದೆ. ಗಾಂಧಿ ಜಯಂತಿಯಿಂದ ಜಯಪ್ರಕಾಶ್ ನಾರಾಯಣ ಜನ್ಮ ದಿನದವರೆಗೂ (ಅ.11) ‘ಸ್ವಾತಂತ್ರ್ಯದಿಂದ ಸ್ವರಾಜ್ಯದೆಡೆಗೆ’ ಶೀರ್ಷಿಕೆಯಡಿ ಮೌನ ಮುರಿಯಬೇಕಾಗಿದೆ. ಎಲ್ಲರೂ ಪ್ರಶ್ನಿಸಬೇಕಾಗಿದೆ- ಕಾಲ ಕೂಗಿ ಕೂಗಿ ಹೇಳುತ್ತಿದೆ’ ಎಂಬ ಘೋಷವಾಕ್ಯದೊಂದಿಗೆ ಫೇಸ್ಬುಕ್ ಲೈವ್ ಮತ್ತು ಆನ್ಲೈನ್ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಅವರು ವಿವರಿಸಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ಹರಿಯಾಣ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು. ಕೇಂದ್ರದ ಜನವಿರೋಧಿ ಕಾಯ್ದೆಗಳಿಗೆ ಅಂಕಿತ ಹಾಕುತ್ತಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಇನ್ನಾದರೂ ತಮ್ಮ ಮೌನ ಮುರಿದು, ಮಾತನಾಡಿಬೇಕಿದೆ’ ಎಂದರು.
ಕಾರ್ಮಿಕ ಮುಖಂಡ ಚಂದ್ರಶೇಖರ್ ಮೇಟಿ, ಸ್ವರಾಜ್ ಇಂಡಿಯಾದ ಉಗ್ರ ನರಸಿಂಹೇಗೌಡ, ಅಭಿರುಚಿ ಗಣೇಶ್ ಪತ್ರಿಕಾಗೋಷ್ಠಿಯಲ್ಲಿದ್ದರು.