ಮೈಸೂರು: ಮೈಸೂರು ನಗರ ಹಾಗೂ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬುಧವಾರ ಸಂಜೆ ಉತ್ತಮ ಮಳೆ ಸುರಿಯಿತು.
ನಗರದಲ್ಲಿ ಸಂಜೆ ಆರು ಗಂಟೆ ಸುಮಾರಿಗೆ ಆರಂಭವಾದ ಮಳೆ ಕೆಲವು ಭಾಗಗಳಲ್ಲಿ ಒಂದೂವರೆ ತಾಸಿಗೂ ಹೆಚ್ಚು ಹೊತ್ತು ಸುರಿಯಿತು.
ನಗರದಲ್ಲಿ ಇಡೀ ದಿನ ಬಿಸಿಲಿನ ವಾತಾವರಣವಿತ್ತು. ಸಂಜೆ ಏಕಾಏಕಿ ವರುಣ ಅಬ್ಬರಿಸಿದ ಕಾರಣ ಹಲವರು ಮಳೆ ನೀರಿನಲ್ಲಿ ನೆನೆದುಕೊಂಡೇ ಮನೆ ಸೇರಬೇಕಾಯಿತು. ದ್ವಿಚಕ್ರವಾಹನ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ಹರಸಾಹಸಪಟ್ಟರು. ಕೆಲವು ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು.
ಪಿರಿಯಾಪಟ್ಟಣ, ಹುಣಸೂರು, ನಂಜನಗೂಡು, ಕೆ.ಆರ್.ನಗರ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಜಯಪುರ ಹೋಬಳಿಯಾದ್ಯಂತ ಧಾರಾಕಾರ ಮಳೆ ಸುರಿದಿದೆ. ವರುಣಾ ಮತ್ತು ಬನ್ನೂರು ಭಾಗದಲ್ಲೂ ಮಳೆಯಾಗಿದೆ.