ಮೈಸೂರು: ‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕುರಿಸಾಕಣೆ ಹಾಗೂ ಕೃಷಿಯನ್ನು ನನ್ನ ಬಿಡದಿ ತೋಟಕ್ಕೆ ಬಂದು ನೋಡಲಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಸವಾಲೆಸೆದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುರಿ ಸಾಕಿದ್ದಾರಾ ಎಂದು ಕೇಳಿರುವ ಸಿದ್ದರಾಮಯ್ಯ ತಾವೊಬ್ಬರೇ ಕುರಿ ಸಾಕಿರೋದು ಎಂದುಕೊಂಡಿದ್ದಾರೆ’ ಎಂದು ವ್ಯಂಗ್ಯವಾಡಿದರು.
‘ಸಿದ್ದರಾಮಯ್ಯ ಸಿಂಧಗಿಯಲ್ಲಿ ಜಾತಿಗೊಂದು ಸಮಾವೇಶ ಮಾಡುತ್ತಿದ್ದಾರೆ. ಇದೇನಾ ಅವರ ಜಾತ್ಯಾತೀತತೆ? ರಾಜ್ಯದಲ್ಲಿ ಜಾತಿಗಳ ನಡುವೆ ಅವರು ಕಂದಕ ಸೃಷ್ಟಿಸುತ್ತಿದ್ದಾರೆ’ ಎಂದು ದೂರಿದರು.
‘ಜೆಡಿಎಸ್ ವೇಗ ನೋಡಿ ಅವರಿಗೆ ತಳಮಳ ಉಂಟಾಗಿರುವುದರಿಂದಲೇ ವೈಯಕ್ತಿಕ ಟೀಕೆಗಳನ್ನು ಮಾಡುತ್ತಿದ್ದಾರೆ. ಅವರೆಷ್ಟೇ ಟೀಕಿಸಿದರೂ ನಾವು ಗಟ್ಟಿಯಾಗುತ್ತೇವೆ’ ಎಂದರು.