ಮೈಸೂರು: ನಗರದಲ್ಲಿ ಹೆಲ್ಮೆಟ್ ಕುರಿತ ಜಾಗೃತಿ ಕಾರ್ಯಕ್ರಮಗಳು ಯಾವುದೇ ಫಲ ನೀಡುವಲ್ಲಿ ವಿಫಲವಾಗಿವೆ. ವಿವಿಧ ಸಂಘ, ಸಂಸ್ಥೆಗಳು ಹಾಗೂ ಪೊಲೀಸ್ ಇಲಾಖೆ ವತಿಯಿಂದ ನಡೆಯುವ ಈ ಜಾಗೃತಿ ನಿರೀಕ್ಷಿತ ಫಲ ನೀಡಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಅಪಘಾತಗಳ ಸಂಖ್ಯೆ ತುಸು ಹೆಚ್ಚಾಗಿದೆ. ಇವುಗಳಲ್ಲಿ ಮೃತಪಟ್ಟವರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದೆ. ಆದರೆ, ಹೆಲ್ಮೆಟ್ ಧರಿಸದೇ ಮೃತಪಟ್ಟವರ ಸಂಖ್ಯೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.
ಕಳೆದ ವರ್ಷ 831 ಅಪಘಾತಗಳು ನಗರದಲ್ಲಿ ಸಂಭವಿಸಿದ್ದವು. ಈ ಬಾರಿ 855 ಅಪಘಾತಗಳು ನಡೆದಿವೆ. ಇವುಗಳಲ್ಲಿ ಕಳೆದ ವರ್ಷ 158 ಮಂದಿ, ಈ ವರ್ಷ 147 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಹೆಲ್ಮೆಟ್ ಹಾಕದವರ ಸಂಖ್ಯೆ ಕಳೆದ ವರ್ಷ 55 ಇದ್ದರೆ, ಈ ವರ್ಷ 51. ಗಾಯಗೊಂಡವರ ಸಂಖ್ಯೆ ಕಳೆದ ವರ್ಷ 879, ಈ ವರ್ಷ 877.
ಸಿದ್ಧಾರ್ಥ ಸಂಚಾರ ಠಾಣಾ ವ್ಯಾಪ್ತಿಯಲ್ಲೇ ಅಧಿಕ!: ಸಿದ್ಧಾರ್ಥ ಸಂಚಾರ ಠಾಣಾ ವ್ಯಾಪ್ತಿಯಲ್ಲೇ ಹೆಲ್ಮೆಟ್ ಇಲ್ಲದೇ ಮೃತಪಟ್ಟವರು ಅಧಿಕ. ಹೆಲ್ಮೆಟ್ ಧರಿಸದೇ ಅಪಘಾತದಿಂದ ಮೃತಪಟ್ಟ 51 ಮಂದಿಯ ಪೈಕಿ 31 ಮಂದಿ ಈ ಠಾಣಾ ವ್ಯಾಪ್ತಿಯಲ್ಲೇ ಸಾವಿಗೀಡಾಗಿದ್ದಾರೆ. ಕೆ.ಆರ್.ಸಂಚಾರ ಠಾಣಾ ವ್ಯಾಪ್ತಿಯಲ್ಲಿ 10, ನರಸಿಂಹರಾಜದಲ್ಲಿ 6, ವಿ.ವಿ.ಪುರಂ ಸಂಚಾರ ಠಾಣಾ ವ್ಯಾಪ್ತಿಯಲ್ಲಿ 4 ಮಂದಿ ಹೆಲ್ಮೆಟ್ ಧರಿಸದ ಕಾರಣಕ್ಕೆ ಮೃತಪಟ್ಟಿದ್ದಾರೆ. ದೇವರಾಜ ಸಂಚಾರ ಠಾಣೆಯಲ್ಲಿ ಮಾತ್ರ ಈ ವರ್ಷ ಯಾವೊಬ್ಬ ವ್ಯಕ್ತಿಯೂ ಹೆಲ್ಮೆಟ್ ಇಲ್ಲದ ಕಾರಣಕ್ಕೆ ಮೃತಪಟ್ಟಿಲ್ಲ.
ಕಳೆದ ವರ್ಷ (2019) ಸಂಭವಿಸಿದ 855 ಅಪಘಾತ ಪ್ರಕರಣಗಳಲ್ಲಿ 144 ಗಂಭೀರ ಪ್ರಕರಣಗಳಾಗಿವೆ. ಇವುಗಳಲ್ಲಿ ಸಿದ್ಧಾರ್ಥ ಸಂಚಾರ ಠಾಣಾ ವ್ಯಾಪ್ತಿಯಲ್ಲೇ 44 ಪ್ರಕರಣಗಳು ದಾಖಲಾಗಿವೆ. ಇದನ್ನು ಬಿಟ್ಟರೆ ಕೆ.ಆರ್.ಠಾಣಾ ವ್ಯಾಪ್ತಿಯಲ್ಲಿ 40, ವಿ.ವಿ ಪುರಂ ಸಂಚಾರ ಠಾಣಾ ವ್ಯಾಪ್ತಿಯಲ್ಲಿ 37, ನರಸಿಂಹರಾಜದಲ್ಲಿ 18 ಹಾಗೂ ದೇವರಾಜದಲ್ಲಿ 5 ಗಂಭೀರ ಅಪಘಾತಗಳು ಸಂಭವಿಸಿವೆ.
2019ರಲ್ಲಿ ನಡೆದ ಅಪಘಾತ ಪ್ರಕರಣಗಳು
ಹೆಲ್ಮೆಟ್ ಮಹತ್ವವನ್ನು ಸಾಂಸ್ಕೃತಿಕ ನಗರಿಯ ವಾಹನ ಸವಾರರು ಈ ವರ್ಷವೂ ಮನಗಂಡಿಲ್ಲ ಎಂದು ಪೊಲೀಸ್ ಇಲಾಖೆಯ ದತ್ತಾಂಶಗಳು ಹೇಳುತ್ತವೆ. 2019ರಲ್ಲೂ ಸಂಭವಿಸಿರುವ ಅಪಘಾತ ಪ್ರಕರಣಗಳಲ್ಲಿ ಮೃತಪಟ್ಟಿರುವವರಲ್ಲಿ ಅಧಿಕ ಮಂದಿ ಹೆಲ್ಮೆಟ್ ಹಾಕದವರೇ ಆಗಿದ್ದಾರೆ. ಒಂದು ವೇಳೆ ಇವರು ಹೆಲ್ಮೆಟ್ ಧರಿಸಿದ್ದರೆ ಜೀವ ಉಳಿಯುತ್ತಿತ್ತು ಎಂದು ಪೊಲೀಸರು ಹೇಳುತ್ತಾರೆ. ಈ ಕುರಿತ ಸಂಕ್ಷಿಪ್ತ ಚಿತ್ರಣ ಇಲ್ಲಿದೆ