ಮೈಸೂರು: ಇಲ್ಲಿನ ವಿಶ್ವಚೇತನ ಸಂಸ್ಕೃತ ಪಾಠಶಾಲೆಯ ಟ್ರಸ್ಟಿ ಪರಶಿವಮೂರ್ತಿ (67) ಅವರ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು, ಶಾಲೆಯ ಮುಖ್ಯಶಿಕ್ಷಕ ಹಾಗೂ ಗಾಯಕಿ ಅನನ್ಯಾ ಭಟ್ ಅವರ ತಂದೆ ವಿಶ್ವನಾಥ್ ಭಟ್ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಒಟ್ಟು ಮೂವರು ಶಿಕ್ಷಕರು.
‘ಅನುದಾನಿತ ಶಿಕ್ಷಣ ಸಂಸ್ಥೆಯಾದ ವಿಶ್ವಚೇತನ ಸಂಸ್ಕೃತ ಪಾಠಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಎಲ್ಲರನ್ನೂ ಟ್ರಸ್ಟಿ ಪರಶಿವಮೂರ್ತಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಪ್ರತಿಯೊಬ್ಬರ ಸಂಬಳದಿಂದ ಇವರು ಪ್ರತಿ ತಿಂಗಳು ಹಣ ಪಡೆಯುತ್ತಿದ್ದರು. ಇವರ ಕಿರುಕುಳಕ್ಕೆ ಬೇಸತ್ತ ಶಾಲೆಯ ಮುಖ್ಯಶಿಕ್ಷಕ ವಿಶ್ವನಾಥ್ ಭಟ್, ಸಹಶಿಕ್ಷಕ ಪರಶಿವ ಹಾಗೂ ಇವರ ಸ್ನೇಹಿತ ಮಡಿವಾಳಸ್ವಾಮಿ ಸಂಸ್ಕೃತ ಪಾಠಶಾಲೆಯ ಮುಖ್ಯಶಿಕ್ಷಕ ಸಿದ್ಧರಾಜು ಕೊಲೆ ಮಾಡಲು ಸಂಚು ರೂಪಿಸಿದರು. ನಾಗೇಶ್ ಎಂಬಾತನಿಗೆ ₹ 7 ಲಕ್ಷ ಹಾಗೂ ಶಿಕ್ಷಕ ಹುದ್ದೆಯ ಆಮಿಷ ಒಡ್ಡಿ ಸುಪಾರಿ ನೀಡಿದ್ದಾರೆ. ನಾಗೇಶ್ ತನ್ನ ಗೆಳೆಯ ನಿರಂಜನ್ ಜತೆ ಸೇರಿ ಸೆ. 20ರ ರಾತ್ರಿ ಪರಶಿವಮೂರ್ತಿ ಅವರ ನಿವಾಸಕ್ಕೆ ನುಗ್ಗಿ ಚಾಕುವಿನಿಂದ ಇರಿದು ಕೊಲೆ ಮಾಡಿದರು’ ಎಂದು ಡಿಸಿಪಿ ಪ್ರಕಾಶ್ಗೌಡ ತಿಳಿಸಿದ್ದಾರೆ.