ನಂಜನಗೂಡು (ಮೈಸೂರು): ತಾಲ್ಲೂಕಿನ ಅಡಕನಹಳ್ಳಿಯ ಕೃಷ್ಣ (20) ಎಂಬ ಯುವಕನನ್ನು ಸಮೀಪದ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿದೆ.
ದುಷ್ಕರ್ಮಿಗಳು, ಶವವನ್ನು ವಾಹನವೊಂದಕ್ಕೆ ಕಟ್ಟಿ ಸುಮಾರು ಒಂದೂವರೆ ಕಿ.ಮೀವರೆಗೆ ಡಾಂಬರು ರಸ್ತೆಯಲ್ಲಿ ಎಳೆದು ತಂದಿದ್ದು, ದೇಹದ ಎಡಭಾಗದ ಚರ್ಮವೆಲ್ಲ ಕಿತ್ತುಬಂದಿದೆ. ಎಳೆದು ತರಲಾದ ರಸ್ತೆಯುದ್ದಕ್ಕೂ ರಕ್ತದ ಕಲೆಗಳು, ತುಂಡರಿಸಿದ ಬೆರಳುಗಳು, ಮೃತದೇಹದ ಬಟ್ಟೆಗಳು ಛಿದ್ರಛಿದ್ರವಾಗಿ ಬಿದ್ದಿದ್ದವು.
ನಂತರ ಯುವಕನ ಸ್ಕೂಟರ್ ಮೇಲೆಯೇ ಶವವನ್ನು ಮಲಗಿಸಿ, ಆರೋಪಿಗಳು ಪರಾರಿಯಾಗಿದ್ದಾರೆ. ಯಾವುದೋ ದ್ವೇಷಕ್ಕೆ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಶವ ಸಿಕ್ಕಿದ ಸ್ವಲ್ಪ ದೂರದಲ್ಲಿ ಮದ್ಯದ ಬಾಟಲಿಗಳು ದೊರಕಿವೆ. ಇಲ್ಲಿ ಮದ್ಯಸೇವಿಸಿ ನಂತರ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.