ಮೈಸೂರು:‘ಬ್ರಾಹ್ಮಣಶಾಹಿ ತಿರುಚಿದ ದೇಶದ ಚರಿತ್ರೆಯಲ್ಲಿ ಕಳೆದು ಹೋದವರ ಮರುಶೋಧ ಇಂದಿನ ಅಗತ್ಯ’ ಎಂದು ಲೇಖಕ ಮಹಾದೇವ ಶಂಕನಪುರ ಪ್ರತಿಪಾದಿಸಿದರು.
ನಗರದಲ್ಲಿ ಶನಿವಾರ ಮೈಸೂರು ಗೆಳೆಯರು ಏರ್ಪಡಿಸಿದ್ದ ‘ನಾಲಿಗೆ ಮೇಲಿನ ಚರಿತೆಗಾರನ ಹಾಡು–ಪಾಡು’ ಸಂಕಿರಣದಲ್ಲಿ ಸನ್ಮಾನ ಸ್ವೀಕರಿಸಿ ’ನನ್ನ ಬದುಕು–ನನ್ನ ಬರಹ’ದ ಬಗ್ಗೆ ಮಾತನಾಡಿದ ಅವರು, ’ಅಂಬೇಡ್ಕರ್ ಅವರ ಚಿಂತನೆಯನ್ನು ನಾನು ಓದಿಕೊಳ್ಳದೇ ಇದ್ದಿದ್ದರೆ, ಚರಿತ್ರೆಯಿಂದ ವಂಚಿತರಾದವರನ್ನು ಹುಡುಕಿ ಬರೆಯಲು, ಚರಿ ತ್ರೆಯ ಉತ್ತಮ ಬೋಧಕನಾಗಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಹೇಳಿದವರು.
‘ವಿವಿಧ ಪ್ರಕಾರಗಳಲ್ಲಿರುವ ನನ್ನ ಬರಹಗಳೆಲ್ಲವೂ ಚರಿತ್ರೆಯಲ್ಲಿ ಕಳೆದುಹೋದವರ ಮರುಶೋಧಗಳೇ ಆಗಿವೆ. ಸಂಶೋಧನೆ, ಕಾವ್ಯ, ಚರಿತ್ರೆ ಹಾಗೂ ಸಂಕೀರ್ಣ ಬರಹಗಳೆಲ್ಲವನ್ನು ಸ್ವಯಂ ಬಿಡುಗಡೆಗಾಗಿ ಬರೆದೆ. ಆದರೆ ಅವುಗಳ ಬಗ್ಗೆ ಮೈಸೂರು ಗೆಳೆಯರು ಚರ್ಚಿಸುತ್ತಿರುವುದು ಇದುವರೆಗೆ ದೊರಕಿರುವ ಪ್ರಶಸ್ತಿಯಷ್ಟೇ ಸಮನಾದ ಗೌರವವನ್ನು ತಂದಿದೆ’ ಎಂದರು.
ಸಂಶೋಧನೆ ಮತ್ತು ಸಂಕೀರ್ಣ ಬರಹಗಳ ಕುರಿತು ಮಾತನಾಡಿದ ವಿಮರ್ಶಕ ರಂಗನಾಥ ಕಂಟನಕುಂಟೆ, ‘ಮಂಟೇಸ್ವಾಮಿ ಮತ್ತು ಮಹದೇಶ್ವರ ಪರಂಪರೆಯ ಬಗ್ಗೆ ವಿಶೇಷ ಪರಿಶ್ರಮವುಳ್ಳ ಮಹಾದೇವ ಶಂಕನಪುರ ಅವರು ಈ ಧಾರೆಗಳಲ್ಲೇ ಹೆಚ್ಚು ಕ್ಷೇತ್ರ ಕಾರ್ಯ, ಅಧ್ಯಯನ ಮತ್ತು ಬರವಣಿಗೆಯನ್ನು ನಡೆಸಿದ್ದಾರೆ. ಹೀಗಾಗಿ ಅವರನ್ನು ಮಂಟೇಸ್ವಾಮಿ ಪರಂಪರೆಯ ತಜ್ಞರು ಎಂದು ನಿಸ್ಸಂದೇಹವಾಗಿ ಕರೆಯಬಹುದು’ ಎಂದರು.
‘ಮುಖ್ಯಧಾರೆಯ ಮಹಾಕಾವ್ಯ ಗಳಾದ ರಾಮಾಯಣ, ಮಹಾಭಾರತ ಹಿಂಸೆಯನ್ನು ತಾತ್ವೀಕರಿಸುತ್ತವೆ. ಆದರೆ ಜಾನಪದ ಕಾವ್ಯಗಳು ಅಹಿಂಸೆಯನ್ನು ಪ್ರತಿಪಾದಿಸುತ್ತವೆ. ಇಂತಹ ಜಾನಪದ ಸಂಸ್ಕೃತಿಯನ್ನೇ ಮಹಾದೇವರ ಬರಹಗಳು ಉಸಿರಾಡುತ್ತವೆ’ ಎಂದರು.
ಕಾವ್ಯ ಕುರಿತು ಮಾತನಾಡಿದ ಲೇಖಕಿ ತ್ರಿವೇಣಿ, ‘ಮಹಾದೇವ ಅವರ ಕವಿತೆಗಳು ಶೋಷಿತ ವರ್ಗದ ಗಂಭೀರ ಸಮಸ್ಯೆಗಳನ್ನು ವಿಶಿಷ್ಟ ಶೈಲಿ ಮತ್ತು ಭಾಷೆಯಲ್ಲಿ ಅಭಿವ್ಯಕ್ತಿಸುತ್ತವೆ’ ಎಂದರು.