ಮೈಸೂರು: ‘ಬಿಜೆಪಿ ನಡೆಸಿದ ಆಪರೇಷನ್ ಕಮಲ ಇದೀಗ ಸಾಬೀತಾಗುತ್ತಿದೆ. ವಿಶ್ವನಾಥ್ ಈ ಸತ್ಯ ಹೇಳಿದ್ದಾರಲ್ಲ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶನಿವಾರ ಇಲ್ಲಿ ತಿಳಿಸಿದರು.
‘ಶಾಸಕರಾಗಿರಲು ಅನರ್ಹ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ. ಅನರ್ಹ ಎಂಬ ಕಳಂಕ ಹೊತ್ತೇ ಇವರು ಮತದಾರರ ಬಳಿ ಹೋಗಬೇಕಿದೆ. ಇವರೆಲ್ಲಾ ಯಾವ ತ್ಯಾಗ ಮಾಡಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಆಸ್ತಿ ಕಳೆದುಕೊಂಡವರಾ ? ಸ್ವಾರ್ಥಿಗಳು’ ಎಂದು ತಮ್ಮ ನಿವಾಸದ ಬಳಿ ಅನರ್ಹ ಶಾಸಕರ ವಿರುದ್ಧ ಹರಿಹಾಯ್ದರು.
‘ಹುಣಸೂರು ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ಸಿದ್ದರಾಗಿದ್ದ ಯೋಗೀಶ್ವರ್ ಭಾವಚಿತ್ರ, ಒಕ್ಕಣೆಯುಳ್ಳ ಕರಪತ್ರದೊಟ್ಟಿಗೆ 30 ಸಾವಿರ ಸೀರೆ ಸಿಕ್ಕಿವೆ. ಇಂತಹವರು ಆಯ್ಕೆಯಾದರೆ ಜನರ ಕೆಲಸ ಮಾಡ್ತಾರಾ ? ಇವರೆಲ್ಲಾ ಲೂಟಿ ಹೊಡೆಯಲು ಬರೋರು’ ಎಂದು ಕಿಡಿಕಾರಿದರು.
ರಮೇಶ ಜಾರಕಿಹೊಳಿ ಹೇಳಿಕೆಗೆ ಸಂಬಂಧಿಸಿದಂತೆ ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಅನರ್ಹರಾಗಿರುವ ಅವರಿಗೆ ಏನು ಕಿಮ್ಮತ್ತಿದೆ. ಮಹತ್ವ ಕೊಡುವ ಅಗತ್ಯವಿಲ್ಲ’ ಎಂದರು.
8 ಸ್ಥಾನ ಗೆಲ್ಲಲ್ಲ: ‘ಮುಖ್ಯಮಂತ್ರಿಯಾಗಿ ಮುಂದುವರೆಯಲು ಬಿ.ಎಸ್.ಯಡಿಯೂರಪ್ಪಗೆ ನೈತಿಕ ಹಕ್ಕಿಲ್ಲ. ಉಪಚುನಾವಣೆಯಲ್ಲಿ ಇವರು 8 ಸ್ಥಾನ ಗೆಲ್ಲಲ್ಲ. ಮುಂದೆ ಸಂಕಷ್ಟ ಕಾದಿದೆ’ ಎಂದು ಸಿದ್ದರಾಮಯ್ಯ ಇದೇ ಸಂದರ್ಭ ಹೇಳಿದರು.
‘ಮುಖ್ಯಮಂತ್ರಿಯೇ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಅನರ್ಹ ಶಾಸಕರಿಗೆ ಸಂಬಂಧಿಸಿದಂತೆ ನಿಮ್ಮ ಎಲ್ಲ ಭರವಸೆ ಈಡೇರಿಸುವೆ. ನಿಮ್ಮನ್ನು ಸಚಿವರನ್ನಾಗಿಯೂ ಮಾಡುವೆ. ಶಂಕರ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, ಸಚಿವರನ್ನಾಗಿಸುವೆ ಎಂದು ಹೇಳಿರುವುದು ನೀತಿ ಸಂಹಿತೆಯ ಉಲ್ಲಂಘನೆಯಲ್ವೇನ್ರೀ’ ಎಂದು ಪ್ರಶ್ನಿಸಿದರು.
ಉಪಚುನಾವಣೆ ಬಳಿಕ ಜೆಡಿಎಸ್ನ ರಾಜಕೀಯ ನಡೆ ಕುರಿತ ಪ್ರಶ್ನೆಗೆ, ‘ಅವರಿಗೆ ನಿಲುವೇ ಇಲ್ಲ. ಮೊದಲು ಬಿಜೆಪಿ ಎಂಟು ಗೆಲ್ಲಲಿ. ನಂತರ ನೋಡೋಣ’ ಎನ್ನುತ್ತಲೇ ತೆರಳಿದರು.
ಸಾಬೀತಾದ ‘ಆಪರೇಷನ್ ಕಮಲ’
ಮೈಸೂರು: ‘ಬಿಜೆಪಿ ನಡೆಸಿದ ‘ಆಪರೇಷನ್ ಕಮಲ’ ಇದೀಗ ಸಾಬೀತಾಗುತ್ತಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಚ್. ವಿಶ್ವನಾಥ್ ಅವರೇ ಈ ಸತ್ಯ ಹೇಳಿದ್ದಾರಲ್ಲ?’ ಎಂದರು.
‘ಮುಖ್ಯಮಂತ್ರಿಯಾಗಿಮುಂದುವರಿಯಲು ಯಡಿಯೂರಪ್ಪಗೆ ನೈತಿಕ ಹಕ್ಕಿಲ್ಲ. ಉಪಚುನಾವಣೆಯಲ್ಲಿ ಇವರು ಎಂಟು ಸ್ಥಾನಗಳನ್ನೂ ಗೆಲ್ಲುವುದಿಲ್ಲ. ಮುಂದೆ ಸಂಕಷ್ಟ ಕಾದಿದೆ’ ಎಂದರು.
ಉಪಚುನಾವಣೆ ಬಳಿಕ ಜೆಡಿಎಸ್ನ ರಾಜಕೀಯ ನಡೆ ಕುರಿತ ಪ್ರಶ್ನೆಗೆ, ‘ಅವರಿಗೆ ನಿಲುವೇ ಇಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.