ಪಿರಿಯಾಪಟ್ಟಣ: ಪಟ್ಟಣದ ಪುರಸಭೆ ಸದಸ್ಯರ ಚುನಾವಣೆ ನಡೆದ ಒಂದೂವರೆ ವರ್ಷದ ನಂತರ ಸರ್ಕಾರ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಿಸಿದ್ದು,ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಲು ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿರುವ ಮಹಿಳಾ ಸದಸ್ಯರು ಶಾಸಕ ಕೆ.ಮಹದೇವ್ ಮನವೊಲಿಕೆಗೆ ಮುಂದಾಗಿದ್ದಾರೆ.
ಅಧ್ಯಕ್ಷ ಸ್ಥಾನ ಸಾಮಾನ್ಯ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎ (ಮಹಿಳೆ) ನಿಗದಿಯಾಗಿದೆ. ಈಗಾಗಲೇ ಪಟ್ಟಣದ ಪುರಸಭೆಯಲ್ಲಿ 14 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಜೆಡಿಎಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆತಿರುವುದರಿಂದ ಆಕಾಂಕ್ಷಿಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆ ಆಸೆ ಗರಿಗೆದರಿದೆ.
ಶಾಸಕ ಕೆ.ಮಹದೇವ್ ಆದೇಶವೇ ಅಂತಿಮವಾಗಿರುವುದರಿಂದ ಆಕಾಂಕ್ಷಿಗಳು ಶಾಸಕರ ಪರಮಾಪ್ತರ ಮೂಲಕ ಈಗಾಗಲೆ ಒತ್ತಡ ಹೇರಲು ಪ್ರಾರಂಭಿಸಿದ್ದಾರೆ.
ಈ ಬಾರಿ ಎರಡು ಹುದ್ದೆಗಳು ಮಹಿಳೆಯರಿಗೆ ಮೀಸಲಾಗಿರುವುದರಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗುವ ಕನಸು ಕಾಣುತ್ತಿದ್ದ ಜೆಡಿಎಸ್ನ ಕೆಲ ಪುರುಷ ಸದಸ್ಯರಿಗೆ ಭಾರಿನಿರಾಸೆಯಾಗಿದೆ.
ಜೆಡಿಎಸ್ ಪಕ್ಷದ ಸಾಮಾನ್ಯ ಮಹಿಳಾ ವರ್ಗಕ್ಕೆ ಸೇರಿದ 8 ಅಭ್ಯರ್ಥಿಗಳು ಈ ಬಾರಿ ಜಯಗಳಿಸಿದ್ದು ವಾರ್ಡ್ 2ರಲ್ಲಿ ಸುವರ್ಣ, 4ರಲ್ಲಿ ರೂಹಿಲ್ಲಾಖಾನಂ, 8 ರಲ್ಲಿ ಪಿ.ಕೆ.ಆಶಾ, 9ರಲ್ಲಿ ಪುಷ್ಪಲತಾ, 17ರಲ್ಲಿ ನಾಗರತ್ನ, 18 ರಲ್ಲಿ ಭಾರತಿ, 20ರಲ್ಲಿ ಶ್ವೇತ, 23ರಲ್ಲಿ ನೂರ್ಜಹಾನ್ ಆಯ್ಕೆಯಾಗಿರುವ ಮಹಿಳಾ ಸದಸ್ಯರಿಗೆ ಅಧ್ಯಕ್ಷ ಹುದ್ದೆಗೇರುವ ಅವಕಾಶ ದೊರೆತಿದೆ.
ಇವರಲ್ಲಿ 2ನೇ ಬಾರಿಗೆ ಆಯ್ಕೆಯಾಗಿರುವ ನಾಗರತ್ನ, ಶಾಸಕರ ಪುತ್ರ ಪಿ.ಎಂ.ಪ್ರಸನ್ನ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಜೆಡಿಎಸ್ ಮುಖಂಡ ಕುಮಾರ್ ಪತ್ನಿ ಶ್ವೇತ ಅವರು ಇತರ ಆಕಾಂಕ್ಷಿಗಳಿಗಿಂತ ಹೆಚ್ಚು ಲಾಭಿಯಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದೆ.
ಉಪಾಧ್ಯಕ್ಷ ಸ್ಥಾನಕ್ಕೂ ಹೆಚ್ಚಿನ ಪೈಪೋಟಿ: ಉಪಾಧ್ಯಕ್ಷ ಸ್ಥಾನ ಬಿಸಿಎ-ಮಹಿಳಾ ವರ್ಗಕ್ಕೆ ಮೀಸಲಾಗಿರುವುದರಿಂದ ಜೆಡಿಎಸ್ನಿಂದ ಆಯ್ಕೆಯಾಗಿರುವವರಲ್ಲಿ 5 ಅಭ್ಯರ್ಥಿಗಳು ಈ ಬಾರಿ ಜಯ ಗಳಿಸಿದ್ದು, ವಾರ್ಡ್ ನಂ 4ರಲ್ಲಿ ಆಯ್ಕೆಯಾಗಿರುವ ರೂಹಿಲ್ಲಾಖಾನಂ, 8ರಲ್ಲಿ ಪಿ.ಕೆ.ಆಶಾ, 9ರಲ್ಲಿ ಪುಷ್ಪಲತಾ, 12ರಲ್ಲಿ ನಾಗರತ್ನ, 23ರಲ್ಲಿ ನೂರ್ಜಹಾನ್ ಅರ್ಹತೆ ಹೊಂದಿದ್ದು.
ಕೆಲವರು ಅಧ್ಯಕ್ಷ ಸ್ಥಾನ ತಪ್ಪಿದ್ದರೆ ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ನಾಗರತ್ನ ಅಧ್ಯಕ್ಷರಾಗಲು ವಿಫಲರಾದರೆ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಸಮಾಧಾನ ಪಡಿಸಿದರೂ ಅಚ್ಚರಿ ಇಲ್ಲ.
ಮೇಲ್ನೋಟಕ್ಕೆ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿರುವ 8 ಮಂದಿ ಮಹಿಳಾ ಸದಸ್ಯರು ಪ್ರಬಲ ಆಕಾಂಕ್ಷಿಗಳಾಗಿದ್ದರೂ ತಮ್ಮ ಪತಿಯ ರಾಜಕೀಯ ಶಕ್ತಿ ಹಾಗೂ ಜಾತಿ ಪ್ರಭಾವ ಬಳಕೆ ಮಾಡುವ ಸಾಧ್ಯತೆ ಇದೆ. ಪಕ್ಷದ ವರಿಷ್ಠರಾದ ಶಾಸಕ ಕೆ.ಮಹದೇವ್ ಆದೇಶವನ್ನು ಆಕಾಂಕ್ಷಿಗಳು ಒಪ್ಪುವ ಸಂಭವವಿದ್ದು ಬಂಡಾಯವೇಳುವ ಸಾಧ್ಯತೆ ಕಡಿಮೆ ಇದೆ.
ಈ ಕುರಿತು ‘ಪ್ರಜಾವಾಣಿ’ ಪ್ರತಿಕ್ರಿಯಿಸಿದ ಪುರಸಭಾ ಚುನಾವಣೆಯಲ್ಲಿ ನಿರೀಕ್ಷೆಯ ಫಲಿತಾಂಶ ಪಕ್ಷದ ಪರವಾಗಿ ಬರದಿರುವ ಬಗ್ಗೆ ಅಸಮಾಧಾನವಿದೆ. ಆದರೂ, ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದು ಎಲ್ಲರ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲಾಗುವುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.