ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಸಂಚಾರಕ್ಕೂ ಬೇಕಿದೆ ಉತ್ತೇಜನ

Last Updated 3 ನವೆಂಬರ್ 2018, 19:46 IST
ಅಕ್ಷರ ಗಾತ್ರ

ಮೈಸೂರು: ಮೈಸೂರು – ಬೆಂಗಳೂರು ನಡುವೆ ಜೋಡಿ ರೈಲು ಮಾರ್ಗ, ವಿದ್ಯುದೀಕರಣವಾದ ಮೇಲೆ ಪ್ರಯಾಣದ ಗುಣಮಟ್ಟವೇನೊ ಏರಿದೆ. ಆದರೆ, ರಾತ್ರಿ ವೇಳೆ ರೈಲುಗಳ ಕೊರತೆಯ ಸಮಸ್ಯೆ ಮುಂದುವರೆದಿದೆ.

ರಾತ್ರಿ 7ರಿಂದ 11ರನಡುವೆ ಬೆಂಗಳೂರಿನಿಂದ ಮೈಸೂರಿನ ಕಡೆಗೆ ಈಗ ಯಾವ ರೈಲೂ ಸಂಚರಿಸುತ್ತಿಲ್ಲ. ಪ್ರತಿನಿತ್ಯ ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಮಂಗಳೂರಿಗೆ ಸಾಗುತ್ತಿದ್ದ ಕಣ್ಣೂರು–ಕಾರವಾರ ಎಕ್ಸ್‌ಪ್ರೆಸ್‌ ರೈಲು ಈಗ ವಾರಕ್ಕೆ ಎರಡು ದಿನ ಮಾತ್ರ ಸಂಚರಿಸುತ್ತಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಮಿಕ್ಕ ನಾಲ್ಕು ದಿನಗಳಲ್ಲಿ ಪ್ರಯಾಣಿಕರು ಮೈಸೂರಿಗೆ ಅನಿವಾರ್ಯವಾಗಿ ಬಸ್ಸುಗಳ ಮೂಲಕವೇ ಬರಬೇಕಾಗಿದೆ.

‘ಅತ್ಯುತ್ತಮ ರೈಲು ಮಾರ್ಗವಿದ್ದರೂ, ರೈಲು ನಿಲ್ದಾಣ ಮೇಲ್ದರ್ಜೆಗೆ ಏರಿದ್ದರೂ ರಾತ್ರಿ ವೇಳೆ ರೈಲುಗಳು ಇಲ್ಲದೇ ಇರುವುದು ದೊಡ್ಡ ಕೊರತೆ. ದುಬಾರಿ ದರ ನೀಡಿ ಬಸ್‌ನಲ್ಲಿಸಂಚರಿಸುವುದು ಕಷ್ಟ. ನಾವೆಲ್ಲ ರೈಲ್ವೆ ಪಾಸ್ ಹೊಂದಿದ್ದೇವೆ. ಪ್ರತಿನಿತ್ಯ ಸಂಚರಿಸುತ್ತೇವೆ. ಇದರಿಂದ ನಮಗೆ ಅತೀವ ನಷ್ಟವಾಗುತ್ತಿದೆ’ ಎಂದು ಪ್ರಯಾಣಿಕ ಖಾಸಗಿ ಸಂಸ್ಥೆಯ ಉದ್ಯೋಗಿ ಜಿ.ಗಿರಿಧರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಳಿಗ್ಗೆ ಮೈಸೂರಿನಿಂದ ಹೊರಡುವ ನಾವು ಸಂಜೆ ಕೆಲಸ ಮುಗಿದ ಬಳಿಕ ರೈಲಿನಲ್ಲೇ ಮೈಸೂರಿಗೆ ಬರುತ್ತಿದ್ದೆವು. ಚಾಮುಂಡಿ ಎಕ್ಸ್‌ಪ್ರೆಸ್‌ ರೈಲು (ಸಂಜೆ 6.15ಕ್ಕೆ) ತಪ್ಪಿದರೆ ಪ್ಯಾಸೆಂಜರ್ ರೈಲಿದೆ (ರಾತ್ರಿ 7ಕ್ಕೆ). ಆದರೆ, ಬಳಿಕ ಮೈಸೂರಿಗೆ ರೈಲುಗಳೇ ಇಲ್ಲ. 11.55ಕ್ಕೆ ಮತ್ತೊಂದು ಪ್ಯಾಸೆಂಜರ್‌ ರೈಲಿದ್ದು, ಅದರಲ್ಲಿ ಸಂಚರಿಸಲು ಸಾಧ್ಯವಾಗದು. ಹಾಗಾಗಿ, ನಾವು ಅನಿವಾರ್ಯವಾಗಿ ಬಸ್‌ ಪ್ರಯಾಣ ಮಾಡಬೇಕಾಗಿದೆ ಎಂದರು.

ನೈರುತ್ಯ ರೈಲ್ವೇಗೆ ನಿರಂತರ ಮನವಿ:ರಾತ್ರಿ ವೇಳೆ ರೈಲು ಬೇಕೆಂದು ಮೈಸೂರು ಗ್ರಾಹಕರ ಪರಿಷತ್‌ ಸೇರಿದಂತೆ ಹಲವು ಸಂಸ್ಥೆಗಳು ನಿರಂತರವಾಗಿ ನೈರುತ್ಯ ರೈಲ್ವೇಗೆ ಮನವಿ ಸಲ್ಲಿಸಿವೆ. ಆದರೆ, ಇದುವರೆಗೂ ಯಾವುದೇ ಮನವಿಯೂ ಈಡೇರಿಲ್ಲ.

ಹಾಲಿ ಚೆನ್ನೈ ಮತ್ತು ಬೆಂಗಳೂರು ನಡುವೆ ಸಂಚರಿಸುತ್ತಿರುವ ಚೆನ್ನೈ–ಬೆಂಗಳೂರು ಇಂಟರ್‌ಸಿಟಿ ರೈಲನ್ನು (ಸಂಖ್ಯೆ 12609/10) ಮೈಸೂರಿನವರೆಗೆ ವಿಸ್ತರಿಸಿದರೆ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ಪರಿಷತ್‌ ವಾದ ಮಂಡಿಸಿತ್ತು. ಈ ರೈಲು ಪ್ರತಿದಿನ ಬೆಳಿಗ್ಗೆ 8ಕ್ಕೆ ಬೆಂಗಳೂರನ್ನು ಬಿಟ್ಟು ಚೆನ್ನೈ ಕಡೆಗೆ ಪ್ರಯಾಣ ಬೆಳೆಸುತ್ತಿದೆ. ಈ ರೈಲನ್ನು ನಸುಕಿನ 5.20ಕ್ಕೆ ಬಿಡುವಂತೆ ಅವಕಾಶ ಮಾಡಿಕೊಟ್ಟರೆ, ಬೆಳಿಗ್ಗೆ 7.45ಕ್ಕೆ ಬೆಂಗಳೂರು ಸೇರುತ್ತದೆ. ಅಂತೆಯೇ, ಚೆನ್ನೈನಿಂದ ಬರುವ ಇದೇ ರೈಲು ರಾತ್ರಿ 8ಕ್ಕೆ ಬೆಂಗಳೂರು ತಲುಪುತ್ತಿದೆ. ಈ ರೈಲನ್ನು ಮುಂದುವರಿಸಿ ಮೈಸೂರು ಕಡೆಗೆ ಸಂಚರಿಸುವಂತೆ ಮಾಡಿದರೆ ರಾತ್ರಿ 11ಕ್ಕೆ ಮೈಸೂರು ಸೇರುತ್ತದೆ ಎಂಬ ಪರಿಹಾರವನ್ನು ಸೂಚಿಸಿತ್ತು. ಆದರೆ, ಇದು ಸಾಧ್ಯವಿಲ್ಲ ಎಂದು ನೈರುತ್ಯ ರೈಲ್ವೆ ಉತ್ತರಿಸಿದೆ.

ಮತ್ತೊಂದು ಮನವಿ:ಪ್ರತಿನಿತ್ಯ ರಾತ್ರಿ 8ಕ್ಕೆ ಬೆಂಗಳೂರಿನಿಂದ ರಾಮನಗರಕ್ಕೆ ‘ಮೆಮು’ ರೈಲು ಸಂಚರಿಸುತ್ತಿದೆ. ‘ಮೆಮು’ ರೈಲುಗಳು ವಿದ್ಯುತ್‌ ಬಳಸಿಕೊಂಡು ಸಂಚರಿಸುತ್ತವೆ. ಈ ರೈಲನ್ನು ಮೈಸೂರಿಗೆ ವಿಸ್ತರಿಸುವಂತೆ ಮನವಿ ಸಲ್ಲಿಸಲಾಗಿದೆ. ಎಲಿಯೂರು ಬಳಿ ನಿರ್ಮಾಣವಾಗುತ್ತಿರುವ ವಿದ್ಯುತ್‌ ಘಟಕವು ಪೂರ್ಣಗೊಂಡಲ್ಲಿ ಈ ಕುರಿತು ಚಿಂತಿಸಬಹುದು. ಅಲ್ಲಿಯವರೆಗೂ ‘ಮೆಮು’ ರೈಲನ್ನು ವಿಸ್ತರಿಸುವುದು ಕಷ್ಟವೆಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಪರಿಷತ್‌ ಸದಸ್ಯ ಯೋಗೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಯಾಟಲೈಟ್‌ ನಿಲ್ದಾಣ ಪರಿಹಾರ: ನಾಗನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಸ್ಯಾಟಲೈಟ್‌ ರೈಲು ನಿಲ್ದಾಣ ಇದಕ್ಕೆ ಪರಿಹಾರವಾಗಲಿದೆ.

ಇದರಿಂದ ಆಗುವ ಮುಖ್ಯ ಅನುಕೂಲವೆಂದರೆ ಹೆಚ್ಚು ರೈಲುಗಳನ್ನು ನಿಲ್ಲಿಸಿಕೊಳ್ಳಲು ಅವಕಾಶ ಸಿಗಲಿದೆ. ಈಗ ಮೈಸೂರು ರೈಲು ನಿಲ್ದಾಣದಲ್ಲಿ 9 ರೈಲುಗಳು ನಿಲ್ಲಲು ಅವಕಾಶವಿದೆ. ಹೆಚ್ಚುವರಿ ರೈಲುಗಳು ಮೈಸೂರಿಗೆ ಬಂದರೆ ಅರ್ಧ ಗಂಟೆ ಮೇಲೆ ನಿಲ್ಲಲಾಗದು.

‘ಒಟ್ಟು ₹ 789 ಕೋಟಿ ವೆಚ್ಚದಲ್ಲಿ ಸ್ಯಾಟಲೈಟ್ ನಿಲ್ದಾಣ ನಿರ್ಮಾಣವಾಗಲಿದೆ. ಇದರಿಂದ ಮೈಸೂರಿಗೆ ಉದ್ಯೋಗಾವಕಾಶಗಳು ಹೆಚ್ಚಲಿವೆ’ ಎಂದು ಸಂಸದ ಪ್ರತಾಪ ಸಿಂಹ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT