ಚಿಕ್ಕಮಗಳೂರು: ‘ಅಭಿವೃದ್ಧಿಯನ್ನೇ ಕಾರ್ಯಸೂಚಿಯಾಗಿಟ್ಟುಕೊಂಡು ಈ ಬಾರಿ ಚುನಾವಣೆ ಎದುರಿಸುತ್ತಿದ್ದೇವೆ. ಜಿಲ್ಲೆಯ ಋಣ ತೀರಿಸುವ ಸಂಕಲ್ಪ ಮಾಡಿದ್ದು, ಅದಕ್ಕೆ ಅವಕಾಶ ನೀಡಿ’ ಎಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ಶಂಕರ್ ಕೋರಿದರು.
ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ‘ಜಿಲ್ಲೆಯ ನದಿ, ಜಲಪಾತ ಒಳಗೊಂ ಡಂತೆ ಯಾವುದೇ ನೀರಿನ ಮೂಲ ಗಳಿಂದ ಸಖರಾಯಪಟ್ಟಣ, ದೇವನೂರು ಭಾಗಕ್ಕೆ ನೀರಾವರಿ ಕಲ್ಪಿಸಲು ಶ್ರಮಿಸುತ್ತೇವೆ. ತೋಟ ಕಾರ್ಮಿಕರ ಸಮಸ್ಯೆ ಬಗೆಹರಿಸು ತ್ತೇವೆ. ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆ ಗೇರಿಸುತ್ತೇವೆ. ಅಭಿವೃದ್ಧಿ ಮಾಡಲು ಒಂದು ಅವಕಾಶ ನೀಡಿ' ಎಂದು ಮನವಿ ಮಾಡಿದರು.
ನಟಿ ಜಯಮಾಲಾ ಮಾತನಾಡಿ, ‘ಬಿಜೆಪಿ ಸುಳ್ಳು ಹೇಳಿ ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. ಅಡುಗೆ ಅನಿಲ, ತೈಲ ಬೆಲೆ ಹೆಚ್ಚಾಗಿದೆ. ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ’ ಎಂದು ಆಪಾದಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಳಷ್ಟು ಜನಪರ ಯೋ ಜನೆ ಜಾರಿಗೊಳಿಸಿದ್ದಾರೆ. ಎಲ್ಲ ಸಮುದಾ ಯದವರ ಅಭಿವೃದ್ಧಿಗೆ ಶ್ರಮಿಸಿದ್ದಾರೆ’ ಎಂದರು.
ಮಾಜಿ ಸಚಿವ ಸಗೀರ್ ಅಹಮದ್ ಮಾತನಾಡಿ, ‘ನಗರಸಭೆಯಲ್ಲಿ ಆರು ತಿಂಗಳಿಗೊಮ್ಮೆ ಅಧ್ಯಕ್ಷರು, ಉಪಾ ಧ್ಯಕ್ಷರು ಬದಲಾಗುತ್ತಾರೆ. ಅಲ್ಲಿ ಭ್ರಷ್ಟಾ ಚಾರ ಹೆಚ್ಚಾಗಿದೆ’ ಎಂದು ದೂಷಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗಾಯತ್ರಿ ಶಾಂತೇಗೌಡ ಮಾತನಾಡಿ, ‘ನಮ್ಮ ಮಾವ 1962ರಲ್ಲೇ ಗುತ್ತಿಗೆ ದಾರರಾಗಿದ್ದರು. ಬೇರೆಯವರ ರೀತಿ ಶಾಸಕರಾದ ನಂತರ ಗುತ್ತಿಗೆದಾ ರರಾಗಲಿಲ್ಲ. ಕಾಂಗ್ರೆಸ್ ಅಭ್ಯರ್ಥಿಯನ್ನು ಮತದಾರರು ಬೆಂಬಲಿಸಬೇಕು’ ಎಂದು ಕೋರಿದರು.
ನಟಿ ಭಾವನಾ ಕಾರ್ಯಕರ್ತರೊಂ ದಿಗೆ ಹೆಜ್ಜೆ ಹಾಕಿ ನರ್ತಿಸಿದರು. ಮುಖಂಡರಾದ ಡಾ.ಡಿ.ಎಲ್.ವಿಜಯ ಕುಮಾರ್, ಎಚ್.ಪಿ.ಮಂಜೇಗೌಡ, ಅತ್ತಿಕಟ್ಟೆ ಜಗನ್ನಾಥ್, ಎ.ಎನ್.ಮಹೇಶ್ ಇದ್ದರು.
ಬಿಜೆಪಿ ಮುಖಂಡರಿಗೆ ನೈತಿಕ ಹಕ್ಕಿಲ್ಲ
‘ಚಿಕ್ಕಮಗಳೂರು–ಉಡುಪಿ ಕ್ಷೇತ್ರದಿಂದ ಈ ಹಿಂದೆ ಸಂಸದರಾಗಿದ್ದ ಸದಾನಂದಗೌಡ ಮತ್ತು ಈಗಿನ ಸಂಸದೆ ಶೋಭಾ ಕರಂದ್ಲಾಜೆ ಅವರು ಚಿಕ್ಕಮಗಳೂರಿನಲ್ಲಿ ಎಲ್ಲಿ ಮನೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಬೇಕು. ನನ್ನ ಆಸ್ತಿ ಇರುವುದು ಮೂಡಿಗೆರೆಯಲ್ಲಿ, ನನ್ನ ಓಟು ಇರುವುದು ಅಲ್ಲಿಯೇ. ನಾನು ಇಲ್ಲಿಯೇ ಹುಟ್ಟಿದ್ದು, ಇಲ್ಲೆ ಮಣ್ಣಾಗುತ್ತೇನೆ. ನನ್ನ ವಿಳಾಸ ಪ್ರಶ್ನಿಸಲು ಜಿಲ್ಲಾ ಬಿಜೆಪಿ ಮುಖಂಡರಿಗೆ ನೈತಿಕ ಹಕ್ಕಿಲ್ಲ’ ಎಂದು ತಿರುಗೇಟು ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.