ಮೈಸೂರು ಡಿಸಿ ನಿವಾಸದಲ್ಲಿ ಅನುಮತಿಯಿಲ್ಲದೇ ಈಜುಕೊಳ ನಿರ್ಮಾಣ: ತನಿಖಾ ವರದಿ

ಮೈಸೂರು: ಮೈಸೂರು ಜಿಲ್ಲಾಧಿಕಾರಿ ನಿವಾಸ ‘ಜಲಸನ್ನಿಧಿ’ಯಲ್ಲಿ ಈಜುಕೊಳ ನಿರ್ಮಾಣ ಮಾಡಲು ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮತಿಯನ್ನೇ ಪಡೆದಿಲ್ಲ ಎಂದು ಪ್ರಾದೇಶಿಕ ಆಯುಕ್ತರ ತನಿಖಾ ವರದಿ ಹೇಳಿದೆ.
ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಅವರು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿರುವ ವರದಿಯು ಮಾಧ್ಯಮಗಳಿಗೆ ಸೋರಿಕೆಯಾಗಿದ್ದು, ಪ್ರಮುಖವಾಗಿ 6 ನ್ಯೂನತೆಗಳು ತನಿಖೆ ವೇಳೆ ಕಂಡುಬಂದಿರುವುದಾಗಿ ತಿಳಿಸಿದೆ.
ಓದಿ: ರೋಹಿಣಿ ಸಿಂಧೂರಿ ವಿರುದ್ದ ಮುಂದುವರೆದ ಪ್ರತಾಪ್ಸಿಂಹ ವಾಗ್ದಾಳಿ
ನಗರಾಭಿವೃದ್ಧಿ ಇಲಾಖೆಯು 2020ರ ಏ. 21ರಂದು ಹೊರಡಿಸಿದ ಅಧಿಸೂಚನೆಯಂತೆ ಪಾರಂಪರಿಕ ಕಟ್ಟಡ
ಗಳ ಸಂರಕ್ಷಣೆ, ನವೀಕರಣ ಕೆಲಸ ಮಾಡಬೇಕಾದರೆ ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮೋದನೆ ಪಡೆಯಬೇಕು. ಆದರೆ, ಈಜುಕೊಳ ನಿರ್ಮಾಣಕ್ಕೆ ಅನುಮೋದನೆ ಪಡೆದಿಲ್ಲ ಎಂದಿದೆ.
ಈಜುಕೊಳ ನಿರ್ಮಾಣಕ್ಕೆ ₹32.55 ಲಕ್ಷ ಮೊತ್ತಕ್ಕೆ ಅಂದಾಜು ಪಟ್ಟಿ ತಯಾರಿಸಿದ್ದು, ಇದಕ್ಕೆ ಲೋಕೋಪಯೋಗಿ ಇಲಾಖೆಯ ಒಪ್ಪಿಗೆ ಪಡೆದುಕೊಂಡಿಲ್ಲ. ಪೂರ್ವಭಾವಿ ಆಡಳಿತಾತ್ಮಕ ಮಂಜೂರಾತಿ ಪಡೆದಿಲ್ಲ. ನಿರ್ಮಾಣದ ಕುರಿತ ಕಾರ್ಯಾದೇಶ ಇರುವುದಿಲ್ಲ. ಕಾಮಗಾರಿಗೆ ಒಪ್ಪಂದ ಪತ್ರಗಳೂ ಇರುವುದಿಲ್ಲ ಎಂಬ ಅಂಶ ವರದಿಯಲ್ಲಿದೆ.
ಓದಿ: ಜಲಸನ್ನಿಧಿ ನವೀಕರಣ: ರೋಹಿಣಿ ಸಿಂಧೂರಿಗೆ ಮತ್ತೊಂದು ತನಿಖೆಯ ಕಂಟಕ
‘ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದ ಆವರಣದಲ್ಲಿ ಈಜುಕೊಳ ನಿರ್ಮಾಣ ಆಗಿರುವುದರಿಂದ, ಸಾರ್ವಜನಿರಿಗೆ ಉಪಯೋಗಿಸಲು ಸಾಧ್ಯವಿಲ್ಲ. ಎಲ್ಲ ಅಂಶಗಳನ್ನು ಗಮನಿಸಿದಾಗ, ಈ ನಿರ್ಮಾಣ ಕಾರ್ಯದ ಹಿಂದೆ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ’ ಎಂದು ವರದಿ ಹೇಳಿದೆ.
ರೋಹಿಣಿ ಸಿಂಧೂರಿ ಅವರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ, ‘ಜನಸನ್ನಿಧಿ’ ಆವರಣದಲ್ಲಿ ಅನುಮತಿ ಪಡೆಯದೆ ಈಜುಕೊಳ ನಿರ್ಮಿಸಿದ್ದ ಕುರಿತಂತೆ ಶಾಸಕ ಸಾ.ರಾ.ಮಹೇಶ್, ಜೆಡಿಎಸ್ ಮುಖಂಡ ಕೆ.ವಿ.ಮಲ್ಲೇಶ್ ಮತ್ತು ತುಮಕೂರಿನ ವಿಶ್ವಮಾನವ ಹಕ್ಕುಗಳ ಸಂಘಟನೆಯ ಅಧ್ಯಕ್ಷ ಸಿದ್ದಲಿಂಗೇಗೌಡ ದೂರು ನೀಡಿದ್ದರು. ಈ ದೂರಿನ ಮೇರೆಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಸೂಚನೆಯಂತೆ ಪ್ರಾದೇಶಿಕ ಆಯುಕ್ತರು ತನಿಖೆ ನಡೆಸಿದ್ದರು. ‘ತನಿಖೆಯ ವರದಿಯನ್ನು ಶನಿವಾರವೇ (ಜೂನ್ 19) ಸಲ್ಲಿಸಿದ್ದೇನೆ’ ಎಂದಷ್ಟೇ ಜಿ.ಸಿ.ಪ್ರಕಾಶ್ ಪ್ರತಿಕ್ರಿಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.