ಮೈಸೂರು: 'ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸುತ್ತಿರುವ ಸಿದ್ದರಾಮೋತ್ಸವ ಕಾಂಗ್ರೆಸ್ ನ ಕೊನೆಯ ನಾಟಕ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ವ್ಯಂಗ್ಯವಾಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಿದ್ದರಾಮಯ್ಯ ಅವರ ಕೊನೇ ಅವತಾರ ಇದು. ಕಾಂಗ್ರೆಸ್ ಭವನದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿ. ಬಹಿರಂಗ ಸಮಾವೇಶವೇಕೆ' ಎಂದು ಪ್ರಶ್ನಿಸಿದರು.
ಸಿಎಂಗೆ ಅಭಿನಂದನೆ: 'ಪಿಎಸ್ಐ ನೇಮಕಾತಿ ಪ್ರಕರಣದಲ್ಲಿ ಎಡಿಜಿಪಿ ಬಂಧನವಾಗಿರುವುದರಿಂದ ಸರ್ಕಾರಕ್ಕೆ ಯಾವುದೇ ಮುಜುಗರವಾಗಿಲ್ಲ. ದಿಟ್ಟ ಕ್ರಮ ತೆಗೆದುಕೊಂಡ ಮುಖ್ಯಮಂತ್ರಿಗಳಿಗೆ ಅಭಿನಂದನೆ ತಿಳಿಸುತ್ತೇನೆ' ಎಂದು ಸೋಮಶೇಖರ್ ಹೇಳಿದರು.
'ಶಾಸಕ ಜಮೀರ್ ಖಾನ್ ಮನೆ ಮೇಲೆ ಎಸಿಬಿ ದಾಳಿ ಕಾಂಗ್ರೆಸ್ಸಿಗರಿಗೆ ಸಂತಸ ತಂದಿದ್ದರೂ ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ. ಪ್ರಾಮಾಣಿಕವಾಗಿದ್ದರೆ ಹೆದರಬೇಕಿಲ್ಲವೆಂದು ಕಾಂಗ್ರೆಸ್ ನಾಯಕರು ಸಲಹೆ ನೀಡಲಿ' ಎಂದು ಪ್ರತಿಕ್ರಿಯಿಸಿದರು.