ಮೈಸೂರು: ಇಲ್ಲಿನ ವಿ.ವಿ.ಮೊಹಲ್ಲಾದ 14ನೇ ಕ್ರಾಸ್ನ ನಿವಾಸಿ ಚಿರಾಗ್ ಮೆಹತಾ ಅವರ ನಿವಾಸದ ಆವರಣದಲ್ಲಿದ್ದ ಗಂಧದ ಮರವೊಂದನ್ನು ಕಳ್ಳರು ಗುರುವಾರ ರಾತ್ರಿ ಕಳವು ಮಾಡಿದ್ದಾರೆ.
ಸುಮಾರು 7 ಅಡಿ ಉದ್ದದ ಬುಡದ ಭಾಗವನ್ನು ಕಳ್ಳರು ಹೊತ್ತುಕೊಂಡು ಹೋಗಿದ್ದಾರೆ. ಉಳಿದ ರೆಂಬೆಗಳನ್ನು ಅಲ್ಲಿಯೇ ಬಿಟ್ಟಿದ್ದಾರೆ ಎಂದು ಅವರು ದೂರು ನೀಡಿದ್ದಾರೆ. ಪ್ರಕರಣ ಜಯಲಕ್ಷ್ಮಿಪುರಂ ಠಾಣೆಯಲ್ಲಿ ದಾಖಲಾಗಿದೆ.
ಅಪಘಾತ; ಬೈಕ್ ಸವಾರ ಸಾವು
ಮೈಸೂರು– ಮಾನಂದವಾಡಿ ಹೆದ್ದಾರಿಯ ದಾರಿಪುರ ಪೌಲ್ಟ್ರಿ ಫಾರಂ ಹತ್ತಿರ ಎಚ್.ಡಿ.ಕೋಟೆ ಕಡೆಗೆ ತೆರಳುತ್ತಿದ್ದ ಕಾರೊಂದು ಎದುರಿನಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ರವಿಚಂದ್ರ (45) ಮೃತಪಟ್ಟಿದ್ದಾರೆ.
ಸುಣ್ಣದಕೇರಿಯ ನಿವಾಸಿಯಾದ ಇವರು ಬೈಕಿನಲ್ಲಿ ಎಚ್.ಡಿ.ಕೋಟೆ ಕಡೆಯಿಂದ ಮೈಸೂರಿಗೆ ಬರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.