ಮೈಸೂರು: ದಸರಾ ಉತ್ಸವದ ಬೆನ್ನಲ್ಲೇ ಮೈಸೂರಿನಲ್ಲಿ ಕಾಂಗ್ರೆಸ್–ಜೆಡಿಎಸ್ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ. ದಸರಾ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿದ್ದ ಕಾಂಗ್ರೆಸ್ನ ಸ್ಥಳೀಯ ಮುಖಂಡರು ಶನಿವಾರ ಸುದ್ದಿಗೋಷ್ಠಿ ನಡೆಸಿ ಜೆಡಿಎಸ್ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.
ಜಿಲ್ಲಾಡಳಿತ ಜವಾಬ್ದಾರಿ ಮರೆತು ಕೆಲಸ ಮಾಡಿದೆ. ಜಿಲ್ಲಾಧಿಕಾರಿ ಮತ್ತು ಅವರ ತಂಡದವರು ಜೆಡಿಎಸ್ ನಾಯಕರ ಕೈಗೊಂಬೆಯಂತೆ ವರ್ತಿಸಿದ್ದಾರೆ. ದಸರಾ ಪಾಸ್ ಹಂಚಿಕೆ, ಕಾರ್ಯಕ್ರಮಗಳ ಆಯೋಜನೆಯಲ್ಲಿ ಲೋಪಗಳು ಉಂಟಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಶಾಸಕ ತನ್ವೀರ್ ಸೇಠ್ ಆಗ್ರಹಿಸಿದರು.
ಪಾಸ್ ಹಂಚಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರ ದರ್ಬಾರ್ ನಡೆದಿದೆ ಎಂದು ದೂರಿದರು.
ದಸರಾ ಉತ್ಸವ ಜನರ ದುಡ್ಡಿನಿಂದ ನಡೆಯುತ್ತದೆ. ಆದರೆ ಸ್ವಂತ ಖರ್ಚಿನಿಂದ ಉತ್ಸವ ಮಾಡಿದಂತೆ ವರ್ತಿಸಿದ್ದಾರೆ. ನಾಡಹಬ್ಬವನ್ನು ತೋಚಿದಂತೆ ಮಾಡಲು ಇದು ಅವರ ಮನೆ ಜಾತ್ರೆ ಅಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಹರಿಹಾಯ್ದರು.