ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮರಣೆ

ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಕೆ.ಆರ್.ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ
Last Updated 5 ಜೂನ್ 2020, 11:07 IST
ಅಕ್ಷರ ಗಾತ್ರ

ಮೈಸೂರು: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯನ್ನು ನಗರದಲ್ಲಿ ಗುರುವಾರ ಹಲವೆಡೆ ಆಚರಿಸಲಾಯಿತು.

ಕೆ.ಆರ್.ವೃತ್ತದಲ್ಲಿರುವ ನಾಲ್ವಡಿ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಚಿವ ಎಸ್.ಟಿ.ಸೋಮಶೇಖರ್ ಕಾರ್ಯಕ್ರಮಗಳಿಗೆ ನಾಂದಿ ಹಾಡಿದರು. ಬಳಿಕ ಮಾತನಾಡಿದ ಅವರು, ‘ನಾಲ್ವಡಿ ಅವರ ಹೆಸರಿನಲ್ಲಿ ಜಿಲ್ಲಾಡಳಿತದಿಂದ ನಾಡಿನ 10 ಮಂದಿ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು’ ಎಂದು ಪ್ರಕಟಿಸಿದರು.

‘ಕೆಆರ್‌ಎಸ್ ಅಣೆಕಟ್ಟೆ ಕಟ್ಟುವುದು ಸಣ್ಣ ಕೆಲಸವಲ್ಲ. ಅದರಲ್ಲೂ ಒಡವೆಗಳನ್ನು ಮಾರಿ ಜನರಿಗೆ ಉಪಕಾರ ಮಾಡುವ ದೊಡ್ಡ ಕೆಲಸ ನಾಲ್ವಡಿ ಅವರಿಂದ ಆಗಿದೆ. ಇಂಥವರ ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸದಿದ್ದರೆ ನನ್ನಂತಹ ರಾಜಕಾರಣಿ ಇದ್ದರೂ ದಂಡ’ ಎಂದು ಅವರು ಹೇಳಿದರು.

‘ಒಡೆಯರ್ ಅವರು ಜಾರಿಗೆ ತಂದ ಸಹಕಾರ ಕ್ಷೇತ್ರ ಈಗಲೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅದೆಷ್ಟೋ ಮಂದಿಗೆ ಬೆಳಕಾಗಿದೆ. ಒಡೆಯರ್ ಅವರು ಕೊಡುಗೆ ನೀಡದ ಕ್ಷೇತ್ರಗಳಿಲ್ಲ. ಶಿಕ್ಷಣ, ನೀರಾವರಿ, ಸಹಕಾರ ಹೀಗೆ ಎಲ್ಲ ಕ್ಷೇತ್ರಗಳಿಗೆ ಅವರು ನೀಡಿದ ಕೊಡುಗೆ ಅಪಾರ’ ಎಂದು ಬಣ್ಣಿಸಿದರು.

‘ಅರಸು ಸಮುದಾಯದ ಅಭಿವೃದ್ಧಿಗೋಸ್ಕರ ನನಗೆ ಕೊಟ್ಟಿರುವ ಮನವಿ ಪತ್ರವನ್ನು ನಾನು ನಾಳೆಯೇ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಶಾಸಕರಾದ ರಾಮದಾಸ್ ಹಾಗೂ ನಾಗೇಂದ್ರ ಅವರ ಜೊತೆ ಸೇರಿ ಸಮುದಾಯಕ್ಕೆ ಬೇಕಾದ ಕೆಲಸವನ್ನು ಮಾಡಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದು ಸಚಿವರು ತಿಳಿಸಿದರು.

ಶಾಸಕರಾದ ಎಸ್.ಎ.ರಾಮದಾಸ್, ನಾಗೇಂದ್ರ ಇತರರು ಇದ್ದರು.

ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಬಸವಣ್ಣನವರ ಜನ್ಮದಿನಾಚರಣೆ ನಡೆಯಿತು. ಬ್ಯಾಂಕಿನ ಅಧ್ಯಕ್ಷ ಕೆ.ಉಮಾಶಂಕರ್, ಉಪಾಧ್ಯಕ್ಷ ಪಡುವಾರಹಳ್ಳಿ ರಾಮಕೃಷ್ಣ ಹಾಗೂ ನಿರ್ದೇಶಕರು ಇದ್ದರು.

ಉಚಿತ ಮಾಸ್ಕ್ ವಿತರಣೆ

ಚಿಕ್ಕಗಡಿಯಾರ ಬಳಿ ಮಾಸ್ಕ್ ಧರಿಸದೇ ಇದ್ದ ವ್ಯಾಪಾರಸ್ಥರಿಗೆ ನೇಸರ ಸೇವಾ ಸಂಸ್ಥೆ ವತಿಯಿಂದ ಉಚಿತವಾಗಿ ಮಾಸ್ಕ್ ವಿತರಿಸುವ ಮೂಲಕ ನಾಲ್ವಡಿ ಅವರ ಜನ್ಮದಿನವನ್ನು ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT