ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತ ಉದ್ಯಾನವನದ ಆನೆಚೌಕೂರು ವಲಯದಲ್ಲಿ ನುಸುಳಿ ತೇಗದ ಮರ ಕಳವು ಮಾಡಿ ಸಾಗಿಸುತ್ತಿದ್ದ ಆರೋಪಿಯನ್ನು ಮರದ ತುಂಡುಗಳ ಸಮೇತ ಇಲಾಖೆ ಸಿಬ್ಬಂದಿ ಬುಧವಾರ ರಾತ್ರಿ ಬಂಧಿಸಿದ್ದಾರೆ ಎಂದು ಎಸಿಎಫ್ ಸತೀಶ್ ತಿಳಿಸಿದ್ದಾರೆ.
ಆನೆಚೌಕೂರು ವಲಯದ ಬಫರ್ ಜೋನ್ ವ್ಯಾಪ್ತಿಯ ಚೆನ್ನಂಗಿ ಶಾಖೆಯ ಅಣ್ಣಿಕೆರೆ ಗಸ್ತಿನ ಬಸವೇಶ್ವರ ನೆಡುತೋಪು ವ್ಯಾಪ್ತಿಯಲ್ಲಿ 7 ತೇಗದ ಮರದ ತುಂಡು ಹಾಗೂ ಒಬ್ಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
22 ತುಂಡು ವಶ: ಘಟನೆಗೆ ಸಂಬಂಧಿಸಿದಂತೆ ವಿಚಾರಣೆಯಲ್ಲಿ ಆರೋಪಿ ಆಸಿಸ್ಸ್ ನೀಡಿದ ಮಾಹಿತಿಯಂತೆ ಗೂಡ್ಲೂರು ಗ್ರಾಮದ ತೋಟವೊಂದರಲ್ಲಿ ಸಂಗ್ರಹಿಸಿದ್ದ 22 ತೇಗದ ಮರವನ್ನು ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ರವಿ, ಮಂಜು, ನಾಗೇಶ್ ಮತ್ತು ಗಣಪತಿ ತಲೆಮರೆಸಿಕೊಂಡಿದ್ದು, ಪತ್ತೆಗೆ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.
ಕಾರ್ಯಾಚರಣೆಯಲ್ಲಿ ಆರ್.ಎಫ್.ಒ. ಕಿರಣ್ ಕುಮಾರ್, ಎ.ಆರ್.ಎಫ್.ಒ. ಚೆನ್ನವೀರೇಶ್ ಗಾಣಿಗೇರ, ಸತೀಶ್ಕುಮಾರ್, ಶಿವು, ತಿಮ್ಮಣ್ಣ, ನಾಗೇಶ್ ಮತ್ತು ತಿತಿಮತಿ ಎಸ್.ಟಿ.ಪಿ.ಎಫ್ ಪ್ಲಟೂನ್ 3ರ ಸಿಬ್ಬಂದಿ ಭಾಗವಹಿಸಿದ್ದರು.