ಮೈಸೂರು: ಮೇಟಗಳ್ಳಿ ಹಾಗೂ ಮಂಡಿ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ನಾಲ್ವರು ಕಳವು ಆರೋಪಿಗಳನ್ನು ಬಂಧಿಸಲಾಗಿದೆ. ಇವರಿಂದ ₹ 12.10 ಲಕ್ಷ ಮೊತ್ತದಷ್ಟು ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೇಟಗಳ್ಳಿ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರಗೌಡ ಅವರ ನೇತೃತ್ವದಲ್ಲಿ ಪೊಲೀಸರು ಬಿಎಂಶ್ರೀ ನಗರದ ಗ್ಯಾಸ್ ಗೋಡಾನ್ ಬಳಿ ಕಾರ್ಯಾಚರಣೆ ನಡೆಸಿ ಮಧು (20), ಕಿರಣ್ (21) ಹಾಗೂ ವಿಜಯ್ (20) ಅವರನ್ನು ಬಂಧಿಸಿದರು. ಇವರು ಜ. 4ರಂದು ತಾಲ್ಲೂಕಿನ ಕಳಸ್ತವಾಡಿಯಲ್ಲಿ ಮನೆಯ ಬೀಗ ಮುರಿದು ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಇವರಿಂದ ₹ 8 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಿಎಸ್ಐ ವಿಶ್ವನಾಥ್, ನಾಗರಾಜನಾಯಕ, ಎಎಸ್ಐ ಪೊನ್ನಪ್ಪ, ಸಿಬ್ಬಂದಿಯಾದ ಲಿಂಗರಾಜಪ್ಪ, ಸುರೇಶ, ಭೀಮಣ್ಣ, ಮಧುಕುಮಾರ್, ಮಧು, ಶ್ರೀನಿವಾಸ, ಮಹೇಶ್, ಚಂದ್ರಕಾಂತ ತಳವಾರ, ನರಸಿಂಹರಾಜು, ಲಿಖಿತ್ ಮತ್ತು ಆಶಾ ಕಾರ್ಯಾಚರಣೆ ತಂಡದಲ್ಲಿದ್ದರು.
ಆರೋಪಿ ಬಂಧನ: ಮಂಡಿ ಠಾಣೆ ಇನ್ಸ್ಪೆಕ್ಟರ್ ಎಲ್.ಅರುಣ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಸಂಬಂಧಿ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಆರೋಪಿ ಕಲ್ಯಾಣಗಿರಿಯ ನಿವಾಸಿ ಈರಪ್ಪ (45) ಎಂಬಾತನನ್ನು ಬಂಧಿಸಿದ್ದಾರೆ. ಈತನಿಂದ ₹ 4.10 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಈತ ತನ್ನ ಸಂಬಂಧಿ ಗಿರೀಶ್ ಎಂಬುವವರ ಮನೆಗೆ ಬಂದು ತಂಗಿದ್ದ. ಈ ಸಮಯದಲ್ಲಿ ಕಳ್ಳತನ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.