ಮೈಸೂರು: ನಗರದ ಸಬ್ ಅರ್ಬನ್ ಬಸ್ ನಿಲ್ದಾಣದ ಸುತ್ತಲಿನ ಪ್ರದೇಶದಲ್ಲಿರುವ ಟೀ ಸ್ಟಾಲ್, ಚಿಲ್ಲರೆ ಅಂಗಡಿಗಳಲ್ಲಿ ಅಕ್ರಮವಾಗಿ ತಂಬಾಕು ಮಾರಾಟ ಮಾಡಲಾಗುತ್ತಿದೆಯೇ ಎಂಬುದನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ ಬುಧವಾರ ಪರಿಶೀಲಿಸಿದರು.
ಅಧಿಕಾರಿಗಳ ತಂಡದೊಂದಿಗೆ ಕಾರ್ಯಾಚರಣೆ ನಡೆಸಿ, ತಂಬಾಕು ಉತ್ಪನ್ನ ಕಾಯ್ದೆ 2003ನ್ನು (ಕೊಟ್ಪಾ) ಉಲ್ಲಂಘಿಸಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದವರಿಂದ ತಂಬಾಕು ವಶಪಡಿಸಿಕೊಂಡು, ದಂಡ ವಿಧಿಸಿದರು.
ತಂಬಾಕು ನಿಯಂತ್ರಣ ಕಾಯ್ದೆ-2003ರ ವಿರುದ್ಧವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ ಮತ್ತು ನೇರ, ಪರೋಕ್ಷವಾಗಿ ತಂಬಾಕು ಜಾಹೀರಾತು ಪ್ರದರ್ಶಿಸಿರುವವರ ವಿರುದ್ಧ ಪ್ರಕರಣ ದಾಖಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಇದೇ ಸಂದರ್ಭ ಖಡಕ್ ಸೂಚನೆ ನೀಡಿದರು.
ಮಹಾರಾಜ ಕಾಂಪ್ಲೆಕ್ಸ್ನ ಕೇರಳಾಪುರ ಹರೀಶ್ ಮಿಲ್ಟ್ರಿ ಹೋಟೆಲ್ ಮುಂಭಾಗದ ಅಂಗಡಿ ಮಾಲೀಕರು ಹಾಗೂ ಇರ್ವಿನ್ ರಸ್ತೆಯ ಟೀ ಅಂಗಡಿ ವ್ಯಾಪಾರಸ್ಥರು ತಂಬಾಕು ಮಾರುತ್ತಿದ್ದುದನ್ನು ಗಮನಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕರಣ ದಾಖಲಿಸುವಂತೆ ಆದೇಶಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಟಿ.ಶಿವಪ್ರಸಾದ್, ಜಿಲ್ಲಾ ಸಲಹೆಗಾರರಾದ ಶಿವಕುಮಾರ್, ನಜರ್ಬಾದ್ ಪೊಲೀಸ್ ಠಾಣೆಯ ಎಎಸ್ಐ ಮಲ್ಲೇಶ್ ಕಾರ್ಯಾಚರಣೆ ತಂಡದಲ್ಲಿದ್ದರು.