ಮೈಸೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ನಡೆಯುವ ಮೈಸೂರು–ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಪುರಸ್ಕೃತಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಅವರ ನಾಮಪತ್ರ ಕ್ರಮಬದ್ಧತೆಯ ಬಗ್ಗೆ ಗುರುವಾರ ನಿರ್ಧಾರ ಹೊರಬೀಳಲಿದೆ.
ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ದೋಷವಿದೆ ಎಂದು ಬಿಜೆಪಿ ಅಭ್ಯರ್ಥಿ ಆರ್.ರಘು (ಕೌಟಿಲ್ಯ) ಆಕ್ಷೇಪಣೆ ಸಲ್ಲಿಸಿದ್ದು, ಎರಡೂ ಪಕ್ಷಗಳಲ್ಲಿ ಆತಂಕಕ್ಕೆ ಕಾರಣವಾಯಿತು. ಹೀಗಾಗಿ, ದಿನವಿಡೀ ಅಭ್ಯರ್ಥಿಗಳು ತಮ್ಮ ವಕೀಲರ ಮೂಲಕ ದಾಖಲೆ ಕ್ರೋಡೀಕರಣದಲ್ಲಿ ತೊಡಗಿದ್ದರು.