ಮೈಸೂರು: ರಾಜ್ಯದಲ್ಲಿನ ಮೃಗಾಲಯ, ಜೈವಿಕ ಉದ್ಯಾನ, ಪಕ್ಷಿಧಾಮ ಹಾಗೂ ರಾಷ್ಟ್ರೀಯ ಉದ್ಯಾನಗಳನ್ನು ಸಾರ್ವಜನಿಕರ ವೀಕ್ಷಣೆಗೆ ಜೂನ್ 8ರಿಂದ ತೆರೆಯಲಾಗುತ್ತಿದೆ. ಈ ಸಂಬಂಧ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಹೀಗಾಗಿ, ಮೈಸೂರು ಮೃಗಾಲಯದಲ್ಲಿ ಪ್ರವಾಸಿಗರ ಸ್ವಾಗತಕ್ಕೆ ಸಿದ್ಧತೆ ನಡೆದಿದ್ದು, ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನಗಳಲ್ಲಿ ಸಫಾರಿಗೂ ಅವಕಾಶ ಸಿಗಲಿದೆ.
ಪ್ರವಾಸಿಗರು, ಸಿಬ್ಬಂದಿ ಮಾಸ್ಕ್ ಧರಿಸುವುದು ಕಡ್ಡಾಯ. 1 ಮೀಟರ್ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಫಾರಿ ವಾಹನಗಳಲ್ಲಿ ಶೇ 50ಕ್ಕಿಂತ ಹೆಚ್ಚು ಮಂದಿ ಪ್ರಯಾಣಿಸುವಂತಿಲ್ಲ. ಪ್ರತಿ ದಿನ ವಾಹನಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು. ಪ್ರಾಣಿಗಳಿಂದಲೂ 1 ಮೀಟರ್ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ.
ಮಾರ್ಗಸೂಚಿ ಜಾರಿ ಪರಿಶೀಲಿಸಲು ನೋಡಲ್ ಅಧಿಕಾರಿಯನ್ನು ಸಮನ್ವಯಕರನ್ನಾಗಿ ನೇಮಿಸಬೇಕು. ಪ್ರವೇಶದ್ವಾರದಲ್ಲೇ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ಜೊತೆಗೆ ಸೋಪು ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕು. ದಟ್ಟಣೆ ತಪ್ಪಿಸಲು ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿ ನಿಗಾ ಇಡಬೇಕು ಎಂದು ಸೂಚಿಸಲಾಗಿದೆ.
‘ಸೋಮವಾರ ಬೆಳಿಗ್ಗೆ ರಾಜ್ಯದ ಎಲ್ಲಾ ಮೃಗಾಲಯಗಳನ್ನು ತೆರೆಯಲಾಗುವುದು. ಪ್ರವಾಸಿಗರು, ಸಿಬ್ಬಂದಿ ಹಾಗೂ ಪ್ರಾಣಿಗಳ ಹಿತದೃಷ್ಟಿಯಿಂದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ತಿಳಿಸಿದರು.
‘ಸಫಾರಿಗೆ ಸಿದ್ಧತೆ ಕುರಿತು ಭಾನುವಾರ ಸಭೆ ನಡೆಸಲಿದ್ದೇವೆ’ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಡಿಸಿಎಫ್ ಡಿ.ಮಹೇಶ್ ಕುಮಾರ್ ಪ್ರತಿಕ್ರಿಯಿಸಿದರು. ಲಾಕ್ಡೌನ್ ಘೋಷಣೆ ಬಳಿಕ ಮಾರ್ಚ್ 15ರಿಂದ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.