ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ 3,167 ಹುಲಿಗಳು! ಮೈಸೂರಿನಲ್ಲಿ ಹುಲಿ ಗಣತಿ ವರದಿ ಬಿಡುಗಡೆ ಮಾಡಿದ ಮೋದಿ

ಹುಲಿ ಯೋಜನೆಯ ಸುವರ್ಣ ಸಂಭ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
Last Updated 9 ಏಪ್ರಿಲ್ 2023, 11:51 IST
ಅಕ್ಷರ ಗಾತ್ರ

ಮೈಸೂರು: ‘ದೇಶದಲ್ಲಿ ಹುಲಿ ಯೋಜನೆ ಆರಂಭವಾದಾಗ ಹುಲಿಗಳ ಸಂಖ್ಯೆ 1,827. 2022ರಲ್ಲಿ ನಡೆದ ಹುಲಿಗಣತಿ ವರದಿ ಪ್ರಕಾರ 3,167 ಹುಲಿಗಳಿವೆ. ಯೋಜನೆಯು 50 ವರ್ಷ ಪೂರೈಸಿರುವ ಸಂದರ್ಭದಲ್ಲಿ, ಹುಲಿಗಳ ಸಂಖ್ಯೆ ಹೆಚ್ಚಿರುವುದು ಇಡೀ ವಿಶ್ವವೇ ಹೆಮ್ಮೆ ಪಡುವ ವಿಚಾರ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.

ನಗರದ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಸಭಾಂಗಣದಲ್ಲಿ ಅರಣ್ಯ ಇಲಾಖೆಯು ಭಾನುವಾರ ಏರ್ಪಡಿಸಿದ್ದ ಹುಲಿ ಯೋಜನೆಯ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಬಂಡೀಪುರವೂ ಸೇರಿ ದೇಶದ ಒಟ್ಟು 9 ಪ್ರದೇಶಗಳಲ್ಲಿ ಹುಲಿ ಸಂರಕ್ಷಣಾ ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಐವತ್ತು ವರ್ಷಗಳಲ್ಲಿ ದೇಶದಲ್ಲಿ ಹುಲಿ ಸಂರಕ್ಷಣೆಗಾಗಿ ಮೀಸಲಿರಿಸಿದ ಕಾಡುಗಳ ಸಂಖ್ಯೆ 50ಕ್ಕೆ ಹೆಚ್ಚಿದೆ. 35 ಹುಲಿ ಸಂರಕ್ಷಿತ ಪ್ರದೇಶಗಳಿಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮಾನ್ಯತೆ ನೀಡಿದೆ. ವಿಶ್ವದ ಹುಲಿಗಳ ಜನಸಂಖ್ಯೆಯ ಶೇ 75ರಷ್ಟು ಭಾರತದಲ್ಲೇ ಇರುವುದು ವಿಶೇಷ’ ಎಂದರು.

‘ಹುಲಿಗಳು ಹೆಚ್ಚಲು ದೇಶದ ಎಲ್ಲರೂ ಕಾರಣರು. ಬೇರೆ ದೇಶಗಳಲ್ಲಿ ವನ್ಯಜೀವಿಗಳು ಕಡಿಮೆಯಾಗುತ್ತಿರುವಾಗ ದೇಶದಲ್ಲಿ ಯಾಕೆ ಹೆಚ್ಚಾಗುತ್ತಿವೆ ಎಂದರೆ, ಇಲ್ಲಿನ ಸಂಸ್ಕೃತಿ, ಪರಂಪರೆ ಮತ್ತು ಸಮಾಜದಲ್ಲಿರುವ ಜೈವಿಕ ವೈವಿಧ್ಯತೆಯ ಕಡೆಗಿನ ಕಾಳಜಿಯೇ ಕಾರಣ. ಪರಿಸರ ಮತ್ತು ಆರ್ಥಿಕತೆಯ ನಡುವೆ ನಮ್ಮಲ್ಲಿ ಗೊಂದಗಳಿಲ್ಲ. ಎರಡಕ್ಕೂ ಸಮಾನ ಆದ್ಯತೆ ನೀಡಲಾಗುತ್ತದೆ’ ಎಂದರು.

‘ಹುಲಿಗಳ ಕುರಿತು ದೇಶದಲ್ಲಿ ಸಾವಿರಾರು ವರ್ಷಗಳ ಇತಿಹಾಸವಿದೆ. ಮಧ್ಯಪ್ರದೇಶದಲ್ಲಿ ಸಾವಿರಾರು ವರ್ಷಗಳ ಹಳೆಯ ಶಿಲಾ ಚಿತ್ರಕಲೆಯಲ್ಲಿ ಹುಲಿಯ ಚಿತ್ರಗಳಿವೆ. ಭಾರ್ಯಾ ಮತ್ತು ಮಹಾರಾಷ್ಟ್ರದಲ್ಲಿರುವ ವರ್ಲಿಯಂಥ ಹಲವು ಸಮುದಾಯಗಳು ಹುಲಿಯನ್ನು ಪೂಜಿಸುತ್ತವೆ. ಅನೇಕ ಜನ ಸಮುದಾಯಗಳು ಬಂಧುವೆಂದು ಭಾವಿಸುತ್ತವೆ. ಹುಲಿಯು ದುರ್ಗಾ ಮತ್ತು ಅಯ್ಯಪ್ಪ ದೇವರ ವಾಹನವಾಗಿದೆ. ದೇಶದಲ್ಲಿ ಪ್ರಕೃತಿ ಸಂರಕ್ಷಣೆ ಎಂಬುದು ಸಂಸ್ಕೃತಿಯ ಒಂದು ಭಾಗವೇ ಆಗಿದೆ. ಇದೇ ಕಾರಣಕ್ಕೆ, ವನ್ಯಜೀವಿ ಸಂರಕ್ಷಣೆಯಲ್ಲಿ ದೇಶ ಹಲವು ಸಾಧನೆಗಳನ್ನು ಮಾಡಿದೆ’ ಎಂದು ಹೇಳಿದರು.

‘ಇಡೀ ವಿಶ್ವದಲ್ಲೇ ದೇಶವು ಅತಿ ದೊಡ್ಡ ಹುಲಿ ಸಂರಕ್ಷಣಾ ಪ್ರದೇಶವನ್ನು ಒಳಗೊಂಡಿದೆ. 30 ಸಾವಿರ ಆನೆಗಳಿವೆ. 3ಸಾವಿರ ಘೇಂಡಾಮೃಗಗಳಿದ್ದು, ಈ ಪ್ರಾಣಿಗಳ ಅತಿ ದೊಡ್ಡ ಸಂರಕ್ಷಣಾ ಪ್ರದೇಶವೂ ನಮ್ಮ ದೇಶದಲ್ಲೇ ಇದೆ. 2015ರಲ್ಲಿ ದೇಶದಲ್ಲಿ 525ರಷ್ಟಿದ್ದ ಸಿಂಹಗಳು 2020ರಲ್ಲಿ 675 ಇದ್ದವು. ಚಿರತೆಗಳು ಶೇ 60ರಷ್ಟು ಹೆಚ್ಚಾಗಿವೆ’ ಎಂದು ಮಾಹಿತಿ ನೀಡಿದರು.

‘ಇವೆಲ್ಲವೂ ಜನರ ಸಹಭಾಗಿತ್ವ ಮತ್ತು ಸಂರಕ್ಷಣೆಯ ಸಂಸ್ಕೃತಿಯಿಂದ ಸಾಧ್ಯವಾಗಿದೆ. ಇದು ಎಲ್ಲರ ಪ್ರಯತ್ನ. ಪ್ರಕೃತಿ ಸಂರಕ್ಷಣೆಗೆ ಇದು ಅತ್ಯಗತ್ಯ. ಇದು ಸದ್ಯದ ತುರ್ತು ಕೂಡ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊತ್ತಿನಲ್ಲಿ ಅರಣ್ಯ ಪ್ರದೇಶ ಮತ್ತು ಮರಗಳೂ ಹೆಚ್ಚಿದೆ. 75 ಜೌಗು ಪ್ರದೇಶಗಳನ್ನು ಅಭಿವೃದ್ಧಿಗಾಗಿ ಗುರುತಿಸಲಾಗಿದೆ. ಮೊದಲಿಗೆ ಕೇವಲ 11 ಪ್ರದೇಶಗಳನ್ನಷ್ಟೇ ಗುರುತಿಸಲಾಗಿತ್ತು. ಒಂದು ದಶಕದ ಅವಧಿಯಲ್ಲಿ ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣ್ಯಗಳ ಸಂಖ್ಯೆ 9ರಿಂದ 468ಕ್ಕೇರಿದೆ’ ಎಂದರು.

ಗುಜರಾತ್‌ ನೆನಪು...
‘ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಆನೆಗಳ ಸಂರಕ್ಷಣೆಯಲ್ಲಿ ಕೆಲಸ ಮಾಡಿದ ಅನುಭವವೂ ಪಾಠ ಕಲಿಸಿದೆ. ಯಾವುದೇ ವನ್ಯಜೀವಿಯನ್ನು ಸಂರಕ್ಷಿಸುವ ಕೆಲಸ ಮಾಡುವಾಗ ಅದು ಇರುವ ಪ್ರದೇಶವನ್ನಷ್ಟೇ ಪರಿಗಣಿಸಿದರೆ ಸಾಲದು. ಅಲ್ಲಿನ ಸ್ಥಳೀಯರು ಮತ್ತು ಪ್ರಾಣಿಗಳ ನಡುವೆ ಭಾವನಾತ್ಮಕ ಮತ್ತು ಆರ್ಥಿಕತೆಯ ನಂಟು ಕೂಡ ಏರ್ಪಡಬೇಕು’ ಅದಕ್ಕಾಗಿಯೇ ಅಲ್ಲಿ ವನ್ಯ ಪ್ರಾಣಿ ಮಿತ್ರ ಯೋಜನೆಯನ್ನು ರೂಪಿಸಲಾಗಿತ್ತು. ನಗದು ಬಹುಮಾನವನ್ನೂ ನೀಡಲಾಗಿತ್ತು’ ಎಂದು ಪ್ರತಿಪಾದಿಸಿದರು.

‘ಗಿರ್‌ ತಳಿಯ ಸಿಂಹಗಳಿಗೆಂದೇ ಪುನರ್ವಸತಿ ಕೇಂದ್ರವನ್ನೂ ಸ್ಥಾಪಿಸಲಾಗಿತ್ತು. ಮಹಿಳಾ ಫಾರೆಸ್ಟರ್ ಹುದ್ದೆಗಳನ್ನೂ ಭರ್ತಿ ಮಾಡಲಾಗಿತ್ತು. ಸಿಂಹ ಇದ್ದರೆ ನಾವು, ನಾವಿದ್ದರೆ ಸಿಂಹ ಎಂಬ ಭಾವನೆಯನ್ನು ಗಟ್ಟಿಗೊಳಿಸಲಾಯಿತು. ಪ್ರವಾಸೋದ್ಯಮ ಮತ್ತು ಪರಿಸರ ಪ್ರವಾಸೋದ್ಯಮಕ್ಕೂ ಅದು ಬೆಂಬಲವಾಗಿದೆ’ ಎಂದರು.

‘ಅದೇ ರೀತಿಯಲ್ಲೇ ಹುಲಿ ಯೋಜನೆಯ ಯಶಸ್ಸನ್ನೂ ನೋಡಬಹುದು. ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚಿವೆ. ಮಾನವ ಪ್ರಾಣಿ ಸಂಘರ್ಷವೂ ಕಡಿಮೆಯಾಗಿದೆ. ಸ್ಥಳೀಯ ಅರ್ಥ ವ್ಯವಸ್ಥೆಗೂ ಬಲ ಬಂದಿದೆ’ ಎಂದರು.

‘ದೇಶದಲ್ಲಿ ಚೀತಾಗಳು ನಿರ್ನಾಮವಾಗಿದ್ದವು. ನಮೀಬಿಯಾ ಮತ್ತು ದಕ್ಷಿಣಾ ಆಫ್ರಿಕಾದಿಂದ ಚೀತಾಗಳನ್ನು ದೇಶಕ್ಕೆ ತರಲಾಗಿತ್ತು. ಈಗ ಈ ನೆಲದಲ್ಲಿ ನಾಲ್ಕು ಚಿತಾ ಮರಿಗಳು ಜನಿಸಿವೆ. ಇದೊಂದು ಶುಭಾರಂಭ. ಜೈವಿಕ ವೈವಿಧ್ಯತೆಯ ಸಂರಕ್ಷಣೆ ಮತ್ತು ಸಮೃದ್ಧಿಗೆ ಅಂತರರಾಷ್ಟ್ರೀಯ ಸಹಕಾರ ಬಹಳ ಮಹತ್ವಪೂರ್ಣವಾದದ್ದು’ ಎಂದರು.

ಅಂತರರಾಷ್ಟ್ರೀಯ ಸಹಭಾಗಿತ್ವ‌ ಅಗತ್ಯ
‘ವನ್ಯಜೀವಿ ಸಂರಕ್ಷಣೆ ಎಂಬುದು ಕೇವಲ ಒಂದು ದೇಶದ ಜವಾಬ್ದಾರಿ ಅಲ್ಲ. ಬದಲಿಗೆ ಅದೊಂದು ವಿಶ್ವಾತ್ಮಕವಾದ ಹೊಣೆಗಾರಿಕೆ. ಅದಕ್ಕಾಗಿ ಅಂತರರಾಷ್ಟ್ರೀಯ ಸಹಭಾಗಿತ್ವ ಅತ್ಯಗತ್ಯ. ಇದು ಈ ಕಾಲದ ತುರ್ತು. 2019ರಲ್ಲಿ ವಿಶ್ವ ಹುಲಿ ದಿನದಂದು ಏಷ್ಯಾ ಖಂಡದಲ್ಲಿ ಬೇಟೆ ಮತ್ತು ಅಕ್ರಮ ವನ್ಯಜೀವಿ ಮಾರಾಟದ ವಿರುದ್ಧ ಅಂತರರಾಷ್ಟ್ರೀಯ ಸಹಭಾಗಿತ್ವದ ಅಗತ್ಯವನ್ನು ಪ್ರತಿಪಾದಿಸಿದ್ದೆ. ಅಂತರರಾಷ್ಟ್ರೀಯ ದೊಡ್ಡ ಬೆಕ್ಕುಗಳ ಸಹಭಾಗಿತ್ವವೂ ಇದೇ ಆಶಯವನ್ನು ಹೊಂದಿದೆ' ಎಂದರು.

‘ಇಡೀ ವಿಶ್ವದ ಪ್ರಮುಖ ದೊಡ್ಡ ಬೆಕ್ಕುಗಳೆನಿಸಿರುವ ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಜಾಗ್ವಾರ್‌, ಚೀತಾ ಹಾಗೂ ಕೂಗರ್‌ನ ಸಂರಕ್ಷಣೆಯೇ ಸಹಭಾಗಿತ್ವದ ಪ್ರಮುಖ ಉದ್ದೇಶ. ಈ ಪ್ರಾಣಿಗಳಿರುವ ದೇಶಗಳು ಸಹಭಾಗಿಗಳಾಗುತ್ತವೆ. ದೇಶಗಳು ಪರಸ್ಪರ ಸಮಸ್ಯೆಗಳ ಕುರಿತು ಚರ್ಚಿಸಬಹುದು. ಪರಿಹಾರವನ್ನು ಒದಗಿಸಬಹುದು. ಸಂಶೋಧನೆ, ತರಬೇತಿ, ಸಾಮರ್ಥ್ಯ ಅಭಿವೃದ್ಧಿಗೂ ಆದ್ಯತೆ ಕೊಡಲಿದೆ. ನಾವೆಲ್ಲರೂ ಸೇರಿಕೊಂಡು ಈ ಪ್ರಾಣಿಗಳಿಗಾಗಿ ಸುರಕ್ಷಿತ ವ್ಯವಸ್ಥೆಯನ್ನು ರೂಪಿಸೋಣ. ನಮ್ಮ ಪರಿಸರ ಸುರಕ್ಷಿತವಾಗಿದ್ದರೆ ಮಾತ್ರ ಮನುಷ್ಯ ಕುಲಕ್ಕೆ ಒಳಿತಾಗುತ್ತದೆ. ಇದು ನಮ್ಮೆಲ್ಲರ ಹೊಣೆ. ಇಡೀ ವಿಶ್ವದ ಹೊಣೆ’ ಎಂದರು.

‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಎಂಬುದು ಜಿ–20 ಶೃಂಗಸಭೆಯ ಉದ್ದೇಶ. ಹವಾಮಾನ ಬದಲಾವಣೆಯ ಕುರಿತ ವಿಶ್ವಸಂಸ್ಥೆಯ ಸಮ್ಮೇಳನದಲ್ಲೂ (cop26) ಈ ಬಗ್ಗೆ ಚರ್ಚೆಯಾಗಿದೆ’ ಎಂದರು.

ಆದಿವಾಸಿಗಳಿಂದ ಕಲಿಯೋಣ...
‘ಸಹ್ಯಾದ್ರಿ, ಪಶ್ಚಿಮ ಘಟ್ಟಗಳ ಅರಣ್ಯಗಳಲ್ಲಿರುವ ಆದಿವಾಸಿಗಳು ಹುಲಿ ಸೇರಿದಂತೆ ಜೀವ ವೈವಿಧ್ಯದ ಸಂರಕ್ಷಣೆಯಲ್ಲಿ ತೊಡಗಿದ್ದಾರೆ. ಅವರ ಜೀವನ, ಸಂಸ್ಕೃತಿ ಇಡೀ ವಿಶ್ವಕ್ಕೆ ಬಹಳ ಉತ್ತಮ ನಿದರ್ಶನ. ಪ್ರಕೃತಿಯಿಂದ ಪಡೆದದ್ದೆಲ್ಲವನ್ನೂ ಅವರು ವಾಪಸು ಕೊಡುತ್ತಾರೆ. ಈ ಸಮತೋಲನ ಹೇಗೆ ಸಾಧ್ಯವಾಯಿತು ಎಂಬುದನ್ನು ನಾವು ಅವರಿಂದ ಕಲಿಯಬಹುದು. ಆ ಬಗ್ಗೆ ನಮ್ಮ ವಿದೇಶಿ ಅತಿಥಿಗಳು ಗಮನಹರಿಸಬೇಕು. ಆದಿವಾಸಿಗಳ ಜೀವನ ಮತ್ತು ಪರಂಪರೆಯ ಕಿಂಚಿತ್ತನ್ನಾದರೂ ನಿಮ್ಮ ದೇಶಕ್ಕೆ ಒಯ್ಯಿರಿ’ ಎಂದು ಕೋರಿದರು.

ಕಾರ್ಯಕ್ರಮಕ್ಕೂ ಮುನ್ನ, ಹುಲಿಯ ಚಿತ್ರವುಳ್ಳ ಫಲಕವನ್ನು ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್‌ ಪ್ರಧಾನಿಗೆ ನೀಡಿದರು. ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಖಾತೆಯ ರಾಜ್ಯ ಸಚಿವ ಅಶ್ವಿನಿಕುಮಾರ್ ಚೌಬೆ ಇದ್ದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT