ಮೈಸೂರು: ತಾಲ್ಲೂಕಿನ ತಾಂಡವಪುರದ ಮಹಾರಾಜ ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಂಡವು ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರಮಟ್ಟದ ‘ಭಾರತ್ ಸೈಕಲ್ ವಿನ್ಯಾಸ ಚಾಲೆಂಜ್’ನಲ್ಲಿ ಗಂಟೆಗೆ 60 ಕಿ.ಮೀ ವೇಗದ ನಾವಿನ್ಯಪೂರ್ಣ ಸೈಕಲ್ ವಿನ್ಯಾಸಕ್ಕೆ ₹1 ಲಕ್ಷ ಬಹುಮಾನ ಪಡೆದಿದ್ದಾರೆ.
‘ದೇಶದ ವಿವಿಧ ಮೂಲೆಗಳಿಂದ 700ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದವು. ಅದರಲ್ಲಿ ಕಾಲೇಜಿನ ಪ್ರಿ–ಥಿಂಕರ್ಸ್ ತಂಡವು ಎಲೆಕ್ಟ್ರಾನಿಕ್ ವಾಹನರಹಿತ (ಇವಿ) ಸೈಕಲ್ ವಿನ್ಯಾಸ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ’ ಎಂದು ಕಾಲೇಜಿನ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಟಿ.ವೆಂಕಟೇಗೌಡ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಗ್ರಾಮೀಣ ಪ್ರತಿಭೆಗಳಾದ ಪ್ರಮೋದ್, ಎಚ್.ಎಂ.ದರ್ಶನ್ ಹಾಗೂ ಮದನ್ ವೇಗವಾಗಿ ಓಡುವ, ಸವಾರರಿಗೆ ಸುಸ್ತಾಗಿಸದೇ ಟಾರ್ಕ್ ವಿನ್ಯಾಸದ ‘ಕ್ಯಾಟಿಯಾ ವಿ–5’ ಸೈಕಲ್ ರೂಪಿಸಿದ್ದು, ಅದಕ್ಕೆ ಎಐಸಿಟಿಇ ಸಂಸ್ಥೆಯು ₹40 ಸಾವಿರ ಅನುದಾನ ನೀಡಿತ್ತು’ ಎಂದು ಹೇಳಿದರು.
‘ಗಂಟೆಗೆ 50–60 ಕಿ.ಮೀ ವೇಗದಲ್ಲಿ ಚಲಿಸಬಹುದು. ಸಾಮಾನ್ಯ ಸೈಕಲ್ಗಿಂತ ಶೇ 40ರಷ್ಟು ಹೆಚ್ಚು ವೇಗವಿದೆ’ ಎಂದು ಮಾಹಿತಿ ನೀಡಿದರು.