ನಂಜನಗೂಡು: ತಾಲ್ಲೂಕಿನ ಸುತ್ತೂರು, ಆಲತ್ತೂರು, ಜಿ.ಮರಳ್ಳಿ, ಬಿಳುಗಲಿ, ಬಿಳಿಗೆರೆ ಗ್ರಾಮಗಳ ಭತ್ತದ ಗದ್ದೆಗಳಿಗೆ ಕೃಷಿ ಅಧಿಕಾರಿಗಳ ತಂಡಮಂಗಳವಾರ ಭೇಟಿ ನೀಡಿ ಪರಿಶೀಲಿಸಿತು.
ಬಳಿಕ ಮಾತನಾಡಿದ ಕೃಷಿ ವಿಜ್ಞಾನಿ ದೀಪಕ್, ‘ರೈತರು ಬೆಳೆದಿರುವ ಭತ್ತದ ಬೆಳೆಗೆ ಕಾಂಡ ಕೊರೆಯುವ ಹುಳು ಮತ್ತು ಎಲೆಸುರುಳಿ ಕೀಟದ ಬಾಧೆ ಕಾಣಿಸಿಕೊಂಡಿದೆ. ಇವುಗಳ ನಿವಾರಣೆಗೆ ಔಷಧ ಸಿಂಪಡಿಸಬೇಕು’ ಎಂದು ಸಲಹೆ ನೀಡಿದರು.
ಕೀಟಬಾಧೆ ನಿವಾರಣೆಗಾಗಿ 2 ಎಂ.ಎಲ್ ಕ್ಲೋರೋಪೈರಿಫಾಸ್ ಔಷಧವನ್ನು 1 ಲೀಟರ್ ನೀರಿನೊಂದಿಗೆ ಬೆರೆಸಬೇಕು. ಎಕರೆಗೆ 200ರಿಂದ 250 ಲೀಟರ್ ದ್ರಾವಣವನ್ನು ಸಿಂಪಡಿಸಬೇಕು. ಈ ವೇಳೆ, ಜಮೀನಿನಲ್ಲಿರುವ ನೀರನ್ನು ಖಾಲಿ ಮಾಡಿದ ಬಳಿಕ ಔಷಧ ಸಿಂಪಡಿಸಬೇಕು. ಬೆಳಗಿನ ಜಾವ ಔಷಧ ಸಿಂಪಡಿಸುವುದು ಒಳ್ಳೆಯದು’ ಎಂದರು.
ರೈತರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕೃಷಿ ಇಲಾಖೆ ಅಧಿಕಾರಿಗಳು ನೀಡುವ ಸೂಚನೆಯನ್ನು ಸರಿಯಾಗಿ ಪಾಲಿಸಬೇಕು ಎಂದು ಹೇಳಿದರು.
ಬೆಳೆಗಳಿಗೆ ತಗಲುವ ರೋಗಬಾಧೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳನ್ನು ಭೇಟಿ ಮಾಡಿ ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಿಳಿಗೆರೆ ಹೋಬಳಿ ಕೃಷಿ ಅಧಿಕಾರಿ ವಿರೂಪಾಕ್ಷ, ರೈತ ಮುಖಂಡರಾದ ಆಲತ್ತೂರು ಚಿಕ್ಕೂಸು, ನಂಜಪ್ಪ ಉಪಸ್ಥಿತರಿದ್ದರು.