ಮೈಸೂರು: ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಡಿ.15, 16ರಂದು ನಗರದಲ್ಲಿ ಬ್ರಾಹ್ಮಣರ ಬೃಹತ್ ಸಮಾವೇಶ ನಡೆಯಲಿದೆ.
ನಗರದ ಅವಧೂತ ದತ್ತಪೀಠದಲ್ಲಿ ನಡೆಯುವ ಸಮಾವೇಶದಲ್ಲಿ ಜಿಲ್ಲೆಯ ಬ್ರಾಹ್ಮಣ ಸಮುದಾಯದ ಜಾಗೃತಿಗಾಗಿ ವಿವಿಧ ಗೋಷ್ಠಿ, ಕಾರ್ಯಕ್ರಮಗಳು ನಡೆಯಲಿವೆ. ಈ ಸಮಾವೇಶಕ್ಕೆ ತ್ರಿಮತಸ್ಥ ಮಠಗಳ ಯತಿಗಳು, ಸ್ವಾಮೀಜಿಗಳು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ.
ಸಮಾವೇಶದ ಮೂಲಕ ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಕುಟುಂಬಕ್ಕೆ ಸರ್ಕಾರಿ ಸೌಲಭ್ಯಗಳು, ಬ್ರಾಹ್ಮಣ ಜನಾಂಗದ ಜಾತಿ ಪ್ರಮಾಣಪತ್ರ, ಗಾಯತ್ರಿ ಭವನ ನಿರ್ಮಾಣಕ್ಕೆ ನಿವೇಶನ ನೀಡುವಂತೆ ಕಾರ್ಯಕ್ರಮವನ್ನು ಉದ್ಘಾಟಿಸಲಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗುತ್ತಿದೆ. ಎರಡು ದಿನಗಳ ಕಾರ್ಯಕ್ರಮದಲ್ಲಿ ಧಾರ್ಮಿಕ ಪೂಜಾ ಕೈಂಕರ್ಯಗಳಿಂದ ಆರಂಭವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ವಿದ್ವತ್ ಗೋಷ್ಠಿ, ಮಹಿಳಾ ಯುವ ಗೋಷ್ಠಿ,ಔದ್ಯೋಗಿಕ ಗೋಷ್ಠಿ, ಶೈಕ್ಷಣಿಕ ಗೋಷ್ಠಿಗಳು ನಡೆಯುವುದು ವಿಶೇಷವಾಗಿದೆ.
ಬ್ರಾಹ್ಮಣ ಯುವಗೋಷ್ಠಿಯಲ್ಲಿ ಸಂಘಟನೆಗೆ ಮಹತ್ವ ನೀಡಲಾಗಿದೆ. ಡಿ. 15ರಂದು ಸಂಜೆ 5ಕ್ಕೆ ನಡೆಯುವ ಗೋಷ್ಠಿಯಲ್ಲಿ ಸಂವಾದ ಕಾರ್ಯಕ್ರಮವೂ ಇರಲಿದೆ. ಕನ್ನಡ ಸಿನಿಮಾ ಸಂಗೀತ ನಿರ್ದೇಶಕ ಕೆ.ಕಲ್ಯಾಣ್ ಅವರು ಅಧ್ಯಕ್ಷತೆವಹಿಸಲಿದ್ದು, ಧಾರ್ಮಿಕ ಚಿಂತಕ ಡಾ.ಶೆಲ್ವಪಿಳ್ಳೈ ಅಯ್ಯಂಗಾರ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಎನ್.ಎಂ.ನವೀನಕುಮಾರ್, ಡಾ.ಅಶೋಕ್ ನರೇಂದ್ರ, ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷ ಎಚ್.ಎನ್.ಶ್ರೀಧರ ಮೂರ್ತಿ ಭಾಗವಹಿಸುತ್ತಿದ್ದಾರೆ.
ಸಮಾವೇಶದ ಭಾಗವಾಗಿ ಶೋಭಾಯಾತ್ರೆ ನಡೆಯಲಿದೆ. 14 ವರ್ಷಗಳ ಬಳಿಕ ಈ ಸಮಾವೇಶ ನಡೆಯುತ್ತಿದ್ದು, ಸಮುದಾಯದ ಸಮಸ್ಯೆ, ಸವಾಲುಗಳನ್ನು ನಿವಾರಿಸಲು ಸಮ್ಮೇಳನಾಧ್ಯಕ್ಷರಾದ ಡಿ.ಟಿ.ಪ್ರಕಾಶ್ ಅವರ ನೇತೃತ್ವದಲ್ಲಿ ಡಿ. 16ರಂದು ಬೆಳಿಗ್ಗೆ 7.30ಕ್ಕೆ ಶಂಕರಮಠ ಆವರಣದಿಂದ ಅವಧೂತ ದತ್ತಪೀಠ ಆಶ್ರಮದವರೆಗೆ ಶೋಭಾಯಾತ್ರೆ ನಡೆಯಲಿದೆ. ವಿವಿಧ ಸ್ತಬ್ಧಚಿತ್ರ, ವಾದ್ಯಗೋಷ್ಠಿ, ನಾದಸ್ವರ ಸೇರಿದಂತೆ ಗಾಯತ್ರಿ ಮಾತೆ, ತ್ರಿಮತಸ್ಥ ಆಚಾರ್ಯರ ಭಾವಚಿತ್ರದ ಮೆರವಣಿಗೆ ಇರಲಿದೆ. ವೇದ ವಿದ್ವಾಂಸರಿಂದ ವೇದಘೋಷದೊಂದಿಗೆ ಸುಮಾರು 10 ಸಾವಿರ ವಿಪ್ರರು ಭಾಗವಹಿಸಲಿದ್ದಾರೆ.
ಬ್ರಾಹ್ಮಣ ಉದ್ಯಮಿಗಳ ಮಳಿಗೆ ಪ್ರದರ್ಶನ: ಎರಡು ದಿನಗಳ ಈ ಕಾರ್ಯಕ್ರಮದಲ್ಲಿ 40 ವಿಪ್ರ ಉದ್ಯಮಿಗಳ ಅಂಗಡಿ ಮಳಿಗೆ ಪ್ರದರ್ಶನ ಇರಲಿದೆ. ಪುಸ್ತಕಗಳು, ಆಹಾರ ಪದಾರ್ಥಗಳು, ಕಾಂಡಿಮೆಂಟ್ಸ್, ಪೂಜಾ ಸಾಮಗ್ರಿಗಳು, ಕಲಾ ಉಪಕರಣಗಳು ಪ್ರದರ್ಶನಗೊಳ್ಳಲಿವೆ.
ಈ ಕಾರ್ಯಕ್ರಮದ ಭಾಗವಾಗಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 10ನೇ ತರಗತಿ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಪುರಸ್ಕರಿಸಲಾಗುವುದು.
ಸಮಾವೇಶಕ್ಕೆ ಮುಖ್ಯಮಂತ್ರಿ ಚಾಲನೆ
ಮೈಸೂರು: ಡಿ.15ರಂದು ಬೆಳಿಗ್ಗೆ 10ಕ್ಕೆ ನಡೆಯುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ ಬ್ರಾಹ್ಮಣ ಯುವ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎನ್.ಶ್ರೀಧರಮೂರ್ತಿ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಸಚಿವ ಆರ್.ವಿ.ದೇಶಪಾಂಡೆ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಪರಕಾಲ ಮಠದ ಅಭಿನವವಾಗೀಶ ಬ್ರಹ್ಮತಂತ್ರ ಸ್ವತಂತ್ರ ಸ್ವಾಮೀಜಿ, ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ದತ್ತ ವಿಜಯಾನಂದ ಸ್ವಾಮೀಜಿ, ಶಾಸಕರಾದ ಸುರೇಶ್ ಕುಮಾರ್, ಎಸ್.ಎ.ರಾಮದಾಸ್, ಬಿ.ಸಿ.ನಾಗೇಶ್ ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಡಿ.16ರಂದು ಸಂಜೆ 5ಕ್ಕೆ ನಡೆಯುವ ಸಮಾರೋಪವನ್ನು ಶಾಸಕ ರವಿ ಸುಬ್ರಹ್ಮಣ್ಯ ಉದ್ಘಾಟಿಸಲಿದ್ದು, ವಿದ್ವಾಂಸ ಡಾ.ಕೆ.ಪಿ.ಪುತ್ತೂರಾಯ ಸಮಾರೋಪ ಭಾಷಣ ಮಾಡಲಿದ್ದಾರೆ. ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಎಚ್.ವಿ.ರಾಜೀವ್, ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತ, ವಿಪ್ರ ಮುಖಂಡ ಕೆ.ಎನ್.ವೆಂಕಟನಾರಾಯಣ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಸದಸ್ಯರಾದ ಅಜಯ್ ಶಾಸ್ತ್ರಿ, ರಂಗನಾಥ್, ಪ್ರಶಾಂತ್, ಜಯಸಿಂಹ ಸುದ್ದಿಗೋಷ್ಠಿಯಲ್ಲಿ ಇದ್ದರು.
ಸಮಾವೇಶದಲ್ಲಿ ಇಂದು
ವಿದ್ವತ್ ಗೋಷ್ಠಿ
ಉದ್ಘಾಟನೆ– ಪ್ರಾಚ್ಯವಿದ್ಯಾ ಸಂಶೋಧನಾಲಯ ನಿವೃತ್ತ ಉಪನಿರ್ದೇಶಕ ಡಾ.ಟಿ.ವಿ.ಸತ್ಯನಾರಾಯಣ. ವಿಷಯ ಮಂಡನೆ– ವಿದ್ವಾಂಸ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ, ಸಂಶೋಧಕ ಡಾ.ಎಚ್.ವಿ.ನಾಗರಾಜರಾವ್, ವಿದ್ವಾಂಸ ಡಾ.ಕಬ್ಬನಾಲೆ ವಸಂತ ಭಾರದ್ವಾಜ್. ಅತಿಥಿಗಳು– ವಿಪ್ರ ಮುಖಂಡರಾದ ಡಾ.ಭಾನುಪ್ರಕಾಶ್ ಶರ್ಮ, ಎಂ.ಬಿ.ಪುರಾಣಿಕ್, ಮ.ಸ.ನಂಜುಂಡಸ್ವಾಮಿ, ಡಾ.ಬಿ.ವಿ.ಕುಮಾರ್. ಅಧ್ಯಕ್ಷತೆ– ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ. ಮಧ್ಯಾಹ್ನ 12.30
ಮಹಿಳಾ ಗೋಷ್ಠಿ
ಉದ್ಘಾಟನೆ– ಪ್ರೊ.ಎಂ.ಸಿ.ನಾಗಲಕ್ಷ್ಮಿ ಚಂದ್ರಶೇಖರ್. ವಿಷಯ ಮಂಡನೆ– ಪ್ರೊ.ಜ್ಯೋತಿ ಶಂಕರ್, ಡಾ.ಜಯಶ್ರೀ ಚಂದ್ರಶೇಖರ್, ಚಲನಚಿತ್ರ ನಿರ್ದೇಶಕಿ ರೂಪಾ ಅಯ್ಯರ್. ಅತಿಥಿಗಳು– ಧಾರ್ಮಿಕ ಚಿಂತಕಿ ಆರತಿ, ಉದ್ಯಮಿ ಪದ್ಮಾ ಶೇಷಾದ್ರಿ, ಸಂಸ್ಕೃತಿ ಚಿಂತಕಿ ಉಮಾ ದೊರೆಸ್ವಾಮಿ, ಡಾ.ಕಮಲಾ ರಾಮನ್, ವಿಪ್ರ ಮುಖಂಡರಾದ ಮಾಲಿನಿ ವಾಸುದೇವ್. ಅಧ್ಯಕ್ಷತೆ– ಪ್ರೊ.ಪ್ರಸನ್ನಾಕ್ಷಿ. ಮಧ್ಯಾಹ್ನ 2.30
ಯುವ ಗೋಷ್ಠಿ
ಉದ್ಘಾಟನೆ– ಕೆಎಸ್ಒಯು ಪರೀಕ್ಷಾಂಗ ಉಪ ಕುಲಸಚಿವ ಡಾ.ಶಲ್ವಪಿಳೈ ಅಯ್ಯಂಗಾರ್. ವಿಷಯ ಮಂಡನೆ– ವಿನ್ಯಾಸ್ ಇನ್ನೋವೆಟಿವ್ ಟೆಕ್ನಾಲಜೀಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎನ್.ನರೇಂದ್ರ, ಸಾಮಾಜಿಕ ಕಾರ್ಯಕರ್ತ ಎನ್.ಎಂ.ನವೀನ್ ಕುಮಾರ್. ಅತಿಥಿಗಳು– ನಿಸರ್ಗ ಸಂಸ್ಥೆಯ ಡಾ.ಅಶೋಕ್, ವಿಪ್ರ ಮುಖಂಡರಾದ ಎಂ.ವಿ.ಶಂಕರನಾರಾಯಣ, ಎಚ್.ಎನ್.ಶ್ರೀಧರ್ ಮೂರ್ತಿ. ಅಧ್ಯಕ್ಷತೆ– ಚಲನಚಿತ್ರ ಸಾಹಿತಿ ಕೆ.ಕಲ್ಯಾಣ್. ಸಂಜೆ 4.40
*
ಬ್ರಾಹ್ಮಣ ಯುವಕರಲ್ಲಿ ಸಂಘಟನೆ ಬಗ್ಗೆ ಜಾಗೃತಿ ಮೂಡಿಸುವುದು ಸಮಾವೇಶದ ಉದ್ದೇಶ. 14 ವರ್ಷಗಳ ಬಳಿಕ ಸಮಾವೇಶ ನಡೆಯುತ್ತಿದ್ದು, ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
-ಎಚ್.ಎನ್.ಶ್ರೀಧರಮೂರ್ತಿ
ಅಧ್ಯಕ್ಷ, ಮೈಸೂರು ಬ್ರಾಹ್ಮಣ ಯುವವೇದಿಕೆ
*
ಬ್ರಾಹ್ಮಣ ಸಮುದಾಯವು ದಿನೇ ದಿನೇ ಬಡತನದತ್ತ ತಳ್ಳಲ್ಪಡುತ್ತಿದೆ. ಶಿಕ್ಷಣ ಪಡೆಯುವುದು ದುಬಾರಿಯಾಗುತ್ತಿದೆ. ಈ ನಿಟ್ಟಿನಲ್ಲಿ ಸಮುದಾಯವನ್ನು ಅಲ್ಪಸಂಖ್ಯಾತವೆಂದು ಘೋಷಿಸಬೇಕು.
-ಮಾ.ವಿ.ರಾಮಪ್ರಸಾದ್
ನಗರಪಾಲಿಕೆ ಸದಸ್ಯ
*
ಸಮಾವೇಶದಲ್ಲಿ 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಸಂಘಟನೆಗೆ ಮಹತ್ವ ನೀಡಲಾಗಿದೆ
-ಡಿ.ಟಿ.ಪ್ರಕಾಶ್
ಅಧ್ಯಕ್ಷ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.