ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆಯದ ಕಾಮಗಾರಿ: ಕಾನೂನಿನ ತೊಡಕು

Last Updated 29 ಜೂನ್ 2018, 9:27 IST
ಅಕ್ಷರ ಗಾತ್ರ

ನಗರಪಾಲಿಕೆಯ ರಂಗಾಚಾರ್ಲು ಪುರಭವನ ಸಮಿತಿಯ ಅಧ್ಯಕ್ಷರಾಗಿ ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಆಯ್ಕಾಯಾಗಿದ್ದಾರೆ. ಕೇವಲ 2 ತಿಂಗಳ ಅವಧಿಗೆ ಆಗಿರುವ ಇವರ ನೇಮಕ ಅವಧಿಯಲ್ಲಿ ಪುರಭವನದ ಅಭಿವೃದ್ಧಿ ಕಾರ್ಯಗಳು ಆಗಬಲ್ಲುದೇ? ಈಗಾಗಲೇ ನಿಂತಿರುವ ಪುರಭವನದ ಅಭಿವೃದ್ಧಿ ಕಾರ್ಯದ ಗತಿಯೇನು? ಎಂದು ಅವರು ‘ಮೆಟ್ರೊ'ಗೆ ಪ್ರತಿಕ್ರಿಯಿಸಿದ್ದಾರೆ.

1. ಪುರಭವನ ಮೇಲ್ದರ್ಜೆ ಕಾರ್ಯಗಳು ನಿಂತುಹೋಗಿ 4 ವರ್ಷಗಳೇ ಕಳೆದಿವೆ. ಇನ್ನೂ ಕುಂಟುತ್ತಾ ಸಾಗುತ್ತಿರುವುದೇಕೆ?

* ಉತ್ತರ ಪ್ರದೇಶ ಮೂಲದ ಛಾಬ್ರಾಸ್ ಸಂಸ್ಥೆಯು ರಾಜಮಾರ್ಗ ನಿರ್ಮಾಣ ಹಾಗೂ ಪುರಭವನ ಮೇಲ್ದರ್ಜೆ ಕಾಮಗಾರಿ ಗುತ್ತಿಗೆ ತೆಗೆದುಕೊಂಡಿತ್ತು. ಕೆಲಸ ಹೆಚ್ಚೂ ಕಡಿಮೆ ಶೇ 60ರಷ್ಟು ಮುಗಿದಿದೆ. ಬಾಕಿ ಕೆಲಸ ಮಾಡಲಾಗದು ಎಂದು ಆ ಸಂಸ್ಥೆಯು ಹಿಂದೆ ಸರಿದಿದೆ. ಇದಕ್ಕೆ ಕಾರಣ ನಗರಪಾಲಿಕೆಯಿಂದ ಸಿಗಬೇಕಿರುವ ಬಾಕಿ ಹಣ. ರಾಜಮಾರ್ಗ ಹಾಗೂ ಪುರಭವನ ಕಾಮಗಾರಿ ನಡೆಸಿರುವುದಕ್ಕೆ ಹಣ ಪಾವತಿಯಾಗಿಲ್ಲ ಎಂದು ಸಂಸ್ಥೆಯು ನ್ಯಾಯಾಲಯದ ಮೆಟ್ಟಿಲೇರಿದೆ. ನ್ಯಾಯಾಲಯ ತಡೆಯಾಜ್ಞೆಯನ್ನೂ ನೀಡಿದೆ. ಹೀಗಾಗಿ ಕಾಮಗಾರಿಗಳು ನಡೆಯುತ್ತಿಲ್ಲ.

ಇದರ ಜತೆಗೆ 2 ತಿಂಗಳಿಗೆ ಮಾತ್ರ ನನ್ನ ಅವಧಿಯಿದೆ. ಸೆಪ್ಟೆಂಬರ್‌ 2ಕ್ಕೆ ಮುಗಿಯುತ್ತದೆ. ಭಾಗ್ಯವತಿ ಅವರು ಮೇಯರ್‌ ಆದಾಗಲೇ ಈ ಕೆಲಸ ಮುಗಿಯಬೇಕಿತ್ತು. ಕೌನ್ಸಿಲ್‌ ಸಭೆಗಳಲ್ಲಿ ವಿಷಯ ಮುಂದಕ್ಕೆ ಹೋಗುತ್ತಲೇ ಇತ್ತು. ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದ ಕಾರಣ ಪುರಭವನ ಸಮಿತಿ ರಚನೆಯಾಗಿರಲಿಲ್ಲ. ಇದೀಗ ಸಮಿತಿ ರಚನೆಯಾಗಿದೆ. ತೊಡಕುಗಳ ನಿವಾರಣೆಗೆ ಈಗ ಕ್ರಮ ತೆಗೆದುಕೊಳ್ಳಬೇಕಿದೆ.

2. ಕಸದ ರಾಶಿ ಬಿದ್ದಿದೆ. ಪಾರಂಪರಿಕ ನಗರಿ ಮೈಸೂರಿನ ಅಂದ ಕೆಡುವುದಿಲ್ಲವೇ? ಇಷ್ಟೊಂದು ನಿರ್ಲಕ್ಷ್ಯವೇಕೆ?
* ಇಲ್ಲಿ ಸಮಸ್ಯೆ ಇರುವುದು ಕಸದ ರಾಶಿಯದ್ದಲ್ಲ. ನ್ಯಾಯಾಲಯದ ತಡೆಯಾಜ್ಞೆ ಇರುವ ಕಾರಣ ಪುರಭವನ ಆವರಣದಿಂದ ಏನನ್ನೂ ತೆರವುಗೊಳಿಸದಂತೆ ಕೈ ಕಟ್ಟಿಹಾಕಲಾಗಿದೆ. ಹಾಗಾಗಿ, ಕಸದ ರಾಶಿಯೂ ಹಾಗೆಯೇ ಬಿದ್ದಿದೆ. ಹೊಸದಾಗಿ ಕಸ ಸೇರದಂತೆ ಕ್ರಮ ತೆಗೆದುಕೊಳ್ಳಬಹುದು. ನಗರಪಾಲಿಕೆಯ ಮಿತಿಯಲ್ಲಿ ಸ್ವಚ್ಛತಾಕಾರ್ಯ ನಡೆಸಬಹುದು. ಈ ಬಗ್ಗೆ ಗಮನಹರಿಸಿ ಕ್ರಮ ತೆಗೆದುಕೊಳ್ಳಲಾಗುವುದು.

3. ಹಾಗಾದರೆ, ಪುರಭವನ ಸಮಿತಿಗೆ ಈಗ ಏನು ಕೆಲಸ?

ಎರಡು ತಿಂಗಳ ಸೀಮಿತ ಅವಧಿಯಲ್ಲಿ ಸಮಿತಿಯು ಕೆಲವು ಅಭಿವೃದ್ಧಿ ಕೆಲಸಗಳನ್ನು ಮಾಡಬಹುದಿದೆ. ಪುರಭವನದಲ್ಲಿ ನಡೆಯುವ ಕಾರ್ಯಕ್ರಮಗಳಿಂದ ಬರುವ ಆದಾಯ (ಬಾಡಿಗೆ) ಹಣದಿಂದ ನಿರ್ವಹಣಾ ಕಾರ್ಯಗಳನ್ನು ನಡೆಸಬಹುದು. ಸುಣ್ಣ ಬಣ್ಣ ಬಳಿಯುವ ಕೆಲಸ ಮಾಡಬಹುದು. ಸಣ್ಣ ಪುಟ್ಟ ಅಭಿವೃದ್ಧಿ ಕಾರ್ಯಗಳಿಗೇನೂ ತಕರಾರಿಲ್ಲ. ಸಮಯದ ಅಭಾವವೇ ನಮಗೆ ದೊಡ್ಡ ಅಡ್ಡಗಾಲು.

4. ಬಯಲುರಂಗಮಂದಿರ ಬಹುತೇಕ ಮುಗಿದಿದೆ. ಅದರ ನಿರ್ವಹಣೆಯನ್ನಾದರೂ ಮಾಡಬಹುದಲ್ಲವೇ?
* ಪುರಭವನಕ್ಕೆ ರಕ್ಷಣೆಯನ್ನು ನೀಡಬಹುದೇ ಹೊರತು ನಿರ್ವಹಣೆ ಮಾಡಲಾಗದು. ಅದಕ್ಕೆ ತಡೆಯಾಜ್ಞೆ ಅವಕಾಶ ಕೊಡದು. ಸಾರ್ವಜನಿಕ ಆಸ್ತಿ ಹಾಳಾಗದಂತೆ ನೋಡಿಕೊಳ್ಳಬಹುದು. ಈ ಬಗ್ಗೆ ಹೆಚ್ಚಿನ ಗಮನ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT