ಮೈಸೂರು: ಅವಧೂತ ದತ್ತಪೀಠ, ನ್ಯಾಚುರಿಯಲ್ ಸಂಸ್ಥೆ ಹಾಗೂ ರಾಷ್ಟ್ರೀಯ ಹಿಂದೂ ಸಮಿತಿ ವತಿಯಿಂದ ಸ್ವಯಂಸೇವಕರು ಚಾಮುಂಡಿ ಬೆಟ್ಟದಲ್ಲಿಸ್ವಚ್ಛತಾ ಅಭಿಯಾನವನ್ನು ಶನಿವಾರ ಕೈಗೊಂಡರು.
ರಸ್ತೆಬದಿಯಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಸ್ಎಸ್ಎಸ್ ಸ್ವಯಂ ಸೇವಕರು ಸಂಗ್ರಹಿಸಿ ತೆರವುಗೊಳಿಸಿದರು.
ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷ ವಿಕಾಸ್ ಶಾಸ್ತ್ರಿ ಮಾತನಾಡಿ, ‘ಚಾಮುಂಡಿ ಬೆಟ್ಟ ಹಿಂದೂಗಳ ಪಾಲಿನ ಧಾರ್ಮಿಕ, ಶಕ್ತಿ ಕೇಂದ್ರ ಮಾತ್ರವಲ್ಲ ಅನೇಕ ಜೀವರಾಶಿಗಳನ್ನು ಹೊಂದಿರುವ ಅರಣ್ಯ ಪ್ರದೇಶವೂ ಇದೆ. ಇಲ್ಲಿಗೆ ಬರುವವರು ಪ್ಲಾಸ್ಟಿಕ್ ತ್ಯಾಜ್ಯ ಚೆಲ್ಲುವ ಮೂಲಕ ವನ್ಯಪ್ರಾಣಿಗಳಿಗೆ ತೊಂದರೆಯನ್ನು ಕೊಡುತ್ತಿರುವುದು ನೋವಿನ ಸಂಗತಿಯಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಬೆಟ್ಟಕ್ಕೆ ವಿದೇಶಿಯರೂ ಭೇಟಿ ಕೊಡುತ್ತಾರೆ. ಅವರೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಮೈಸೂರಿನ ಬಗ್ಗೆ ಟೀಕೆ ಮಾಡಿರುವುದನ್ನು ನೋಡಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದ್ದೇವೆ. ಮೈಸೂರಿನ ಪ್ರಮುಖ ಸ್ಥಳಗಳಲ್ಲಿ ಒಂದಾದ ಚಾಮುಂಡಿ ಬೆಟ್ಟವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇದನ್ನು ಧಾರ್ಮಿಕ ಸ್ಥಳವಾಗಿಯೇ ಉಳಿಸಿಕೊಳ್ಳಬೇಕು. ಪಾರ್ಟಿ ಮಾಡಿ ಅದರ ಮಹತ್ವವನ್ನು ಕಳೆಯಬಾರದು’ ಎಂದು ಕೋರಿದರು.
ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಕುಮಾರ್, ಎನ್ಐಇ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿನಂದನ್ ಕೆ.ಎಸ್., ಉಮೇಶ್, ರಾಷ್ಟ್ರೀಯ ಹಿಂದೂ ಸಮಿತಿ ಪದಾಧಿಕಾರಿಗಳಾದ ಪ್ರದೀಪ್, ತೇಜಸ್, ವಿನಯ್, ಗಗನ್ ಪಾಲ್ಗೊಂಡಿದ್ದರು.